ನವದೆಹೆಲಿ: ಕಾಶ್ಮೀರದ ಮಾಜಿ ಪ್ರತ್ಯೇಕತಾವಾದಿ ಮುಖಂಡ ಸಜ್ಜದ್ ಲೋನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಭೇಟಿ ಮಾಡಿ ಚರ್ಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಹಿನ್ನಲೆಯಲ್ಲಿ ಲೋನ್ ಮತ್ತು ನರೇಂದ್ರ ಮೋದಿ ಅವರ ಭೇಟಿ ಪ್ರಾಮುಖ್ಯತೆ ಪಡೆದಿದ್ದು, ಇಬ್ಬರು ನಾಯಕರು ಚುನಾವಣಾ ಪೂರ್ವ ಮೈತ್ರಿ ಕುರಿತು ಚರ್ಚಿಸಿರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಚರ್ಚೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಜ್ಜದ್ ಲೋನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಹಿರಿಯಣ್ಣನಿದ್ದಂತೆ ಎಂದು ಹೇಳುವ ಮೂಲಕ ಮೈತ್ರಿ ಶಂಕೆಯನ್ನು ಮತ್ತಷ್ಟು ಗಟ್ಟಿಮಾಡಿದ್ದಾರೆ.
ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದ ಸಜ್ಜದ್ ಲೋನ್ ಅವರು, ಸುಮಾರು 1 ಗಂಟೆ ಕಾಲ ಚರ್ಚಿಸಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಕುರಿತು ತುಂಬಾ ಆಸಕ್ತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ನಾನು ಉತ್ಸುಕನಾಗಿದ್ದೆ. ನರೇಂದ್ರ ಮೋದಿ ಅವರು ತುಂಬಾ ಸರಳ ಮತ್ತು ಸಜ್ಜನ ವ್ಯಕ್ತಿಯಾಗಿದ್ದಾರೆ. ತಾವು ಪ್ರಧಾನಿ ಎಂಬ ಅಂಶವನ್ನು ಯಾವುದೇ ವಿಚಾರದಲ್ಲಿಯೂ ತೋರ್ಪಡಿಸದೇ ಆತ್ಮೀಯ ಸ್ನೇಹಿತರಂತೆ ತಮ್ಮೊಂದಿಗೆ ಚರ್ಚಿಸಿದರು.
ಈ ವೇಳೆ ನಾನು ದೇಶದ ಪ್ರಧಾನಿಯನ್ನು ಭೇಟಿ ಮಾಡುತ್ತಿದ್ದೇನೆಯೇ ಅಥವಾ ನನ್ನ ಹಿರಿಯಣ್ಣನೊಂದಿಗೆ ಮಾತನಾಡುತ್ತಿದ್ದೇನೆಯೇ ಎಂಬ ಶಂಕೆ ಮೂಡಲಾರಂಭಿಸಿತು. ಅಷ್ಟು ಆತ್ಮೀಯರಾಗಿ ಮೋದಿ ಮಾತನಾಡಿದರು. ಈ ಹಿಂದೆಯೂ ಕೂಡ ಕಾಶ್ಮೀರ ವಿಧಾನಸಭಾ ಚುನಾವಣೆಯ ವಿಚಾರ ಬಂದಾಗಲೆಲ್ಲಾ ಬಿಜೆಪಿ ಪರ ನಿಲುವು ತೆಗೆದುಕೊಳ್ಳುತ್ತಿದ್ದ ಸಜ್ಜದ್ ಖಾನ್ ಅವರ ನಡವಳಿಕೆಯನ್ನು ನೋಡಿ ಸಜ್ಜದ್ ಖಾನ್ ಅವರ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಈ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ ಸಜ್ಜದ್ ಖಾನ್, ನಾನು ಚುನಾವಣಾ ಮೈತ್ರಿ ಕುರಿತು ಮಾತನಾಡಲು ಬಂದಿಲ್ಲ. ಬದಲಿಗೆ ಕಾಶ್ಮೀರ ಅಭಿವೃದ್ಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತೀವ ಆಸಕ್ತಿ ಮತ್ತು ಶ್ರದ್ಧೆ ಇದ್ದು, ಈ ವಿಚಾರವಾಗಿ ಮಾತನಾಡಲು ಆಗಮಿಸಿದ್ದೇನೆ ಎಂದು ಲೋನ್ ಸ್ಪಷ್ಟಪಡಿಸಿದರು.
ಜಗತ್ತಿನ ಅತಿ ಸುಂದರ ಪ್ರದೇಶಗಳಲ್ಲಿ ಕಾಶ್ಮೀರ ಕೂಡ ಒಂದು. ಕಾಶ್ಮೀರದಲ್ಲಿನ ಪ್ರವಾಸೋಧ್ಯಮ ಅಭಿವೃದ್ಧಿಗಾಗಿ ಮತ್ತು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾತನಾಡಲು ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೆ ಎಂದು ಹೇಳಿದರು. ಈ ಹಿಂದೆಯೂ ಕೂಡ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಅವರು ಶ್ರೀನಗರಕ್ಕೆ ಭೇಟಿ ಲೋನ್ ಅವರೊಂದಿಗೆ ಚರ್ಚಿಸಿದ್ದರು. ಇದು ಕಾಶ್ಮೀರದಲ್ಲಿ ಸಜ್ಜದ್ ಲೋನ್ ಅವರ ಪಕ್ಷ ಬಿಜೆಪಿಯೊಂದಿಗೆ ಚುನಾವಣಾ ಕಣಕ್ಕಿಳಿಯಲಿದೆ ಎಂಬ ಅನುಮಾನವನ್ನು ಗಟ್ಟಿಗೊಳಿಸುತ್ತಿದೆ.
Advertisement