ಶರದ್ ಪವಾರ್ ಗೆ ತಿರುಗೇಟು ನೀಡಿದ ಶಿವಸೇನೆ

ಮಹಾರಾಷ್ಟ್ರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಮುಂಬರುವ...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಮಧ್ಯಂತರ ಚುನಾವಣೆಗೆ ಸಿದ್ದರಿರುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಪವಾರ್ ನೀಡಿದ್ದ ಕರೆಗೆ ತಿರುಗೇಟು ನೀಡಿರುವ ಶಿವಸೇನೆ, ಪವಾರ್ ಸದ್ಯದ ಅಸ್ಥಿರ ಸರ್ಕಾರವನ್ನು ತಮ್ಮ ಆಟದ ಗಾಳವನ್ನಾಗಿಸಿಕೊಂಡು ರಾಜಕೀಯ ಆಟವಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.

ರಾಯಗಢದ ಆಲಿಭಾಗ್‌ನಲ್ಲಿ ಎನ್‌ಸಿಪಿ ಆಯೋಜಿಸಿದ್ದ 2 ದಿನಗಳ ಸಭೆಯಲ್ಲಿ ಭಾಗಿಯಾಗಿದ್ದ ಎನ್‌ಸಿಪಿ ರಾಷ್ಟ್ರಾಧ್ಯಕ್ಷ ಶರದ್ ಪವಾರ್, ಮಹಾರಾಷ್ಟ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ನಂತರ ಮಹಾರಾಷ್ಟ್ರದಲ್ಲಿ ನಡೆದ ಸನ್ನಿವೇಶ ಕುರಿತಂತೆ ಮುಂಬರಬಹುದಾದ ಚುನಾವಣೆಯನ್ನು ಎದುರಿಸಲು ಸಿದ್ಧರಿರುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು.

ಚುನಾವಣೆಯ ನಂತರ ಷರತ್ತು ರಹಿತ ಬಾಹ್ಯ ಬೆಂಬಲವನ್ನು ಬಿಜೆಪಿಗೆ ನೀಡಿದ್ದ ಪವಾರ್ ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ಉಳಿಸುವುದು ಎನ್‌ಸಿಪಿ ಪಕ್ಷದ ಕೆಲಸವಲ್ಲ ಎಂದಿದ್ದರು. ಅಲ್ಲದೇ, ಎನ್‌ಸಿಪಿ ಬಾಹ್ಯ ಬೆಂಬಲ ಘೋಷಿಸಿದ ನಂತರವಷ್ಟೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವಿವಾದಾತ್ಮಕ ರೀತಿಯಲ್ಲಿ ಬಹುಮತ ಸಾಬೀತು ಪಡಿಸಿದ್ದರು ಎಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ತನ್ನ ಮುಖ ಪುಟ ಸಾಮ್ನಾದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಅಸ್ಥಿರ ಸರ್ಕಾರವನ್ನು ಶರದ್ ಪವಾರ್ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪಕ್ಷ ಬಿಡುವುದಿಲ್ಲ. ಶಿವಸೇನೆ ವಿರೋಧ ಪಕ್ಷವಾಗಿ ಸ್ಥಿರವಾಗಿ ನಿಂತಿದ್ದು, ತನ್ನ ಪಾತ್ರವನ್ನು ಉತ್ತಮವಾಗಿ ಹಾಗೂ ಪ್ರಮಾಣಿಕವಾಗಿ ನಿರ್ವಹಿಸುತ್ತದೆ ಎಂದು ಸಾಮ್ನಾದಲ್ಲಿ ಹೇಳಿಕೊಂಡಿದೆ.

ಪವಾರ್ ರಾಜಕೀಯ ಆಟ ಆಡುವುದರಲ್ಲಿ ಮತ್ತು ಅಪನಂಬಿಕೆ ಹುಟ್ಟುಹಾಕುವುದರಲ್ಲಿ ನಿಸ್ಸೀಮರು. ರಾಜಕೀಯದಲ್ಲಿ ತಾವು ಹೇಗೆ ಬೇಕಾದರೂ ಆಡಬಹುದು ನಂತರ ಅದೇ ಆಟವನ್ನು ರಾಜಕೀಯ ಪರಿಸ್ಥಿತಿಗಳಿಗೆ ಉಪಯೋಗಿಸಿಕೊಂಡು 41 ಸದಸ್ಯರ ಬೆಂಬಲದೊಂದಿಗೆ ಹೊಸ ಸರ್ಕಾರವನ್ನೇ ನಿರ್ಮಿಸಬಹುದು ಎಂದು ಕೊಂಡಿರುವುದು
ಹಾಸ್ಯಸ್ಪದವಾಗಿದೆ ಎಂದು ಹೇಳಿರುವ ಸೇನೆ, ಇಂತಹ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ತೆಗೆದು ಕೊಳ್ಳಬಾರದು.

ಪವಾರ್ ಹೇಳುವುದೇ ಒಂದು ಮಾಡುವುದೇ ಇನ್ನೊಂದು ಅವರಿಗೆ ಗೊಂದಲ ಸೃಷ್ಟಿ ಮಾಡುವ ಅಭ್ಯಾಸವಿದೆ. ಈ ರೀತಿಯ ಹೇಳಿಕೆಗಳ ಮೂಲಕ ರಾಜಕೀಯ ವಲಯದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಿವಸೇನೆ ಸಾಮ್ನಾ ಪತ್ರಿಕೆಯಲ್ಲಿ ಬರೆದು ಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com