ನವದೆಹಲಿ: ಬಹುಶಃ ಇದಕ್ಕಿಂತ ಉದ್ಧಟತನ ಬೇರೆ ಇರಲಾರದು ಅನ್ನಿಸುತ್ತದೆ. ಸಕ್ಕರೆಯಿಂದ ಡಯಾಬಿಟಿಸ್ ಬರುತ್ತದೆ ಎಂದಾದರೆ ಅದನ್ನು ನಿಷೇಧ ಮಾಡಲು ಸಾಧ್ಯವೇ? ಬಿಡದೇ ಸಿಗರೇಟು ಸೇದುವವರಿಗೆ ಕ್ಯಾನ್ಸರ್ ಏಕೆ ಬರುವುದಿಲ್ಲ? ಈ ಬಗ್ಗೆ ವೈದ್ಯರಿಗೆ ಹೇಳಲು ಸಾಧ್ಯವೇ? ಮಾತ್ರವಲ್ಲ ಸಕ್ಕರೆಗಿಂತ ಬೀಡಿಯೇ ಹೆಚ್ಚು ಸುರಕ್ಷಿತ ಎಂದದ್ದು ಬಿಜೆಪಿ ಸಂಸದ ಶ್ಯಾಮ್ ಚರಣ್ ಗುಪ್ತಾ. ದುರಂತವೆಂದರೆ ಭಾರತದಲ್ಲಿ ಸಿಗರೇಟ್ ಕ್ಯಾನ್ಸರ್ಗೆ ಕಾರಣವಲ್ಲ ಎಂಬ ಬುದ್ಧಿಗೇಡಿ ವರದಿ ನೀಡಿದ ದಿಲೀಪ್ ಗಾಂಧಿ ನೇತೃತ್ವದ ಸಂಸದೀಯ ಸಮಿತಿಯಲ್ಲಿ ಗುಪ್ತಾ ಅವರೂ ಇದ್ದಾರೆ.
ಗುಪ್ತಾ ಬಹುಕೋಟಿ ಮೌಲ್ಯದ ಬೀಡಿ ಉದ್ಯಮದ ಮಾಲೀಕ ರೂ ಆಗಿರುವುದರಿಂದ ತಂಬಾಕು ಉತ್ಪನ್ನದ ಉದ್ದಿ ಮೆಯ ಪರವಾಗಿ ವಾದ ಮಂಡಿಸುತ್ತಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
ಸಕ್ಕರೆಯನ್ನೂ ನಿಷೇಧಿಸಿ: ಸಕ್ಕರೆ ಸೇವನೆ ಯಿಂದ ಡಯಾಬಿಟೀಸ್ ಬರುತ್ತದೆ. ಹಾಗೆಂದು ಅದನ್ನು ನಿಷೇಧಿಸಲು ಸಾಧ್ಯವೇ ಎಂದು ಗುಪ್ತ ವಿತಂಡ ವಾದ ಮಂಡಿಸಿದ್ದಾರೆ. ಹಾಗಿದ್ದರೆ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವೇ ಎಂದು ಹೊಣೆಗೇಡಿತನದ ಮಾತುಗಳನ್ನಾಡಿದ್ದಾರೆ.
ಎಚ್ಚರಿಕೆ ಸಂದೇಶಕ್ಕೆ ವಿರೋಧ: ಇಷ್ಟು ಮಾತ್ರವಲ್ಲ ಸಿಗರೇಟು ಮತ್ತು ಬೀಡಿ ಪ್ಯಾಕೆಟ್ ಗಳಲ್ಲಿ ಚಿತ್ರ ಸಹಿತ ಎಚ್ಚರಿಕೆ ನೀಡುವುದಕ್ಕೂ ಅವರು ವಿರೋಧಿಸಿದ್ದಾರೆ. ಅದಕ್ಕೆ ಅವರು
ನೀಡುವ ಕಾರಣವೂ ವಿಶೇಷ. ಸಿಗರೇಟು ಅಥವಾ ಬೀಡಿ ಸೇವನೆ ಹಾನಿಕರ ಎನ್ನುವದರ ಎಚ್ಚರಿಕೆ ಚಿತ್ರವನ್ನು ಹಾಲಿ ಶೇ.40ರಿಂದ ಶೇ.80ಕ್ಕೆ ಹೆಚ್ಚಿಸುವುದು ಸಮರ್ಥನೀಯವಲ್ಲ
ಎಂದಿದ್ದಾರೆ. ಇದರಿಂದ ತಂಬಾಕು ಉತ್ಪನ್ನಗಳಿಗೆ ಹೆಚ್ಚಿನ ಪ್ರಚಾರ ಕೊಟ್ಟಂತಾಗುತ್ತದೆ ಎಂದು ವಾದಿಸಿದ್ದಾರೆ.
Advertisement