ಚೆನ್ನೈ: ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ನಡೆದಿದ್ದ ಎನ್ಕೌಂಟರ್ ಪ್ರಕರಣವನ್ನು ತನಿಖೆಗೆ ಒಪ್ಪಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರಬರೆದಿದ್ದಾರೆ.
ನಿನ್ನೆ ರಕ್ತಚಂದನ ಮರಗಳನ್ನು ಕದಿಯುತ್ತಿದ್ದ ಮರಗಳ್ಳರ ಮೇಲೆ ಆಂಧ್ರಪ್ರದೇಶದ ಸ್ಪೆಷಲ್ ಟಾಸ್ಕ್ ಫೋರ್ಸ್ ಅಧಿಕಾರಿಗಳು ನಡೆಸಿದ್ದ ಗುಂಡಿನ ದಾಳಿಯನ್ನು ಖಂಡಿಸಿರುವ ಪನ್ನೀರ್ ಸೆಲ್ವಂ ಅವರು, ಕಾರ್ಮಿಕರನ್ನು ಬಂಧಿಸುವ ಎಲ್ಲ ಅವಕಾಶಗಳಿದ್ದಾಗ್ಯೂ ಅಧಿಕಾರಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿರುವುದು ನಿಜಕ್ಕೂ ಅಮಾನವೀಯ ಎಂದು ಪನ್ನೀರ್ ಸೆಲ್ವಂ ಪತ್ರದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ರಕ್ತಚಂದನ ಮರಗಳ್ಳರ ಮೇಲಿನ ಎನ್ಕೌಂಟರ್ ಪ್ರಕರಣ ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಬಾಂಧವ್ಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಉಭಯ ರಾಜ್ಯಗಳ ಸಂಚಾರದಲ್ಲಿ ಸಾಕಷ್ಟು ವ್ಯತ್ಯಯ ಕಂಡಬಂದಿದೆ. ತಿರುಪತಿ, ಚಿತ್ತೂರು ಸೇರಿದಂತೆ ಆಂಧ್ರದ ನಾನಾ ಪ್ರದೇಶಗಳಿಗೆ ತಮಿಳುನಾಡಿನಿಂದ ಸಂಚರಿಸುತ್ತಿದ್ದ ನೂರಾರು ಬಸ್ಗಳ ಪೈಕಿ ಕೇವಲ ಬೆರಳೆಣಿಕೆ ಬಸ್ಗಳು ಮಾತ್ರ ಸಂಚರಿಸುತ್ತಿವೆ.
ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ ಚಿತ್ತೂರು ಜಿಲ್ಲಾಧಿಕಾರಿ ಸಿದ್ಧಾರ್ಥ್
ಇನ್ನು ನಿನ್ನೆ ನಡೆದ ಎನ್ಕೌಂಟರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚಿತ್ತೂರು ಜಿಲ್ಲಾಧಿಕಾರಿ ಸಿದ್ಧಾರ್ಥ್ ಜೈನ್ ಅವರು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿದ್ದಾರೆ. ಅಲ್ಲದೆ ಪ್ರಕರಣದ ಕುರಿತಾದ ಪ್ರಾಥಮಿಕ ವರಿದಿಯನ್ನು ತರಿಸಿಕೊಂಡಿರುವ ಸಿದ್ಧಾರ್ಥ್ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ ಕಾಂತಾರಾವ್ ಅವರು, ಆತ್ಮರಕ್ಷಣೆಗಾಗಿ ಕಳ್ಳರ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
Advertisement