
ನವದೆಹಲಿ: ಶ್ರೀನಗರದಲ್ಲಿ ಪಾಕಿಸ್ತಾನದ ಧ್ವಜ ಹಾರಾಟ ಮಾಡಿದ್ದಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ಪ್ರತ್ಯೇಕತಾವಾದಿ ಮಸರತ್ ಅಲಂ ತನ್ನ ಭಾರತ ವಿರೋಧಿ ನಡೆಯನ್ನು ಸಮರ್ಥಿಸಿಕೊಂಡಿದ್ದಾನೆ.
ನಿನ್ನೆ ಪ್ರತ್ಯೇಕತಾವಾದಿ ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿ ಮತ್ತು ಮಸರತ್ ಅಲಂ ನೇತೃತ್ವದಲ್ಲಿ ಶ್ರೀನಗರದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಾ, ಭಾರತದ ವಿರುದ್ಧವಾಗಿ ನಡೆಸಿದ ರ್ಯಾಲಿ ನಡೆಸಿ, ಪಾಕ್ ಧ್ವಜಕ್ಕೆ ಹಾರಾಟ ಮಾಡಲಾಗಿತ್ತು. ಈ ನಡೆಯನ್ನು ಸಮರ್ಥಿಸಿಕೊಂಡ ಮಸರತ್ ಅಲಂ, ಭಾರತದಲ್ಲಿ ಪಾಕ್ ಧ್ವಜ ಹಾರಿಸುವುದರಲ್ಲಿ ತಪ್ಪೇನಿಲ್ಲ. ನಾನು ಪಾಕ್ ಧ್ವಜ ಹಾರಿಸಿಲ್ಲ, ಆದರೆ ನಮ್ಮ ಬೆಂಬಲಿಗರು ಧ್ವಜ ಹಾರಿಸಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಹಾಗೂ ಇದು ದೊಡ್ಡ ಅಪರಾಧವಲ್ಲ ಎಂದು ಹೇಳಿಕೆ ನೀಡಿದ್ದಾನೆ.
ನಿನ್ನೆ ರ್ಯಾಲಿಗೆ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರ ರ್ಯಾಲಿ ನಡೆಸಿದ ಪ್ರತ್ಯೇಕತಾವಾದಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಸೂಚಿಸಿತ್ತು. ಜಮ್ಮ ಕಾಶ್ಮೀರದ ಪೊಲೀಸರು ಸೈಯದ್ ಅಲಿ ಶಾ ಗೀಲಾನಿ ಮತ್ತು ಮಸರತ್ ಅಲಂ ಸೇರಿಹಂತೆ ಇತರೆ ಪ್ರತ್ಯೇಕತಾವಾದಿಗಳ ವಿರುದ್ಧ ಎಫ್ ಐಆರ್ ದಾಖಲಿಸಿರುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ, ಸರ್ಕಾರದ ಮಾತಿಗೂ ಬಗ್ಗದೇ ಮಸರತ್ ಅಲಂ, ಪಾಕ್ ಧ್ವಜ ಹಾರಿಸುವುದರಲ್ಲಿ ತಪ್ಪೇನು ಕಾಣಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾನೆ.
ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರವು ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದ ಪ್ರತ್ಯೇಕತಾವಾದಿ ನಾಯಕ ಮಸರತ್ ಅಲಂನನ್ನು ಮಾರ್ಚ್ 7ರಂದು ಬಿಡುಗಡೆ ಮಾಡಿತ್ತು. ಪ್ರತ್ಯೇಕತಾವಾದಿ ಸಂಘಟನೆಯಾಗಿರುವ ಹುರಿಯತ್ ಕಾನ್ಫರೆನ್ಸ್ನ ಮುಂಚೂಣಿ ನಾಯಕನಾಗಿದ್ದ ಮಸರತ್ ಅಲಂ ಈ ಹಿಂದೆ ಜಮ್ಮುಕಾಶ್ಮೀರದಲ್ಲಿ ನಡೆದ ಗಲಭೆಗಳು ಹಾಗೂ ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ.
ಕಣಿವೆ ರಾಜ್ಯದಲ್ಲಿ 2010ರ ಸಂದರ್ಭ ನಡೆದಿದ್ದ ವಿವಿಧ ಗಲಭೆಗಳು, ಭದ್ರತಾ ಪಡೆಗಳ ಮೇಲಿನ ಹಲ್ಲೆ ಮತ್ತು ಇತರ ಸಮಾಜಘಾತುಕ ಕೃತ್ಯಗಳಲ್ಲಿ ಮಸರತ್ ಪ್ರಮುಖ ಪಾತ್ರ ವಹಿಸಿದ್ದ. ಈ ಗಲಭೆಗಳಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 112 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು.
ಇಂದಿಗೂ ಕೂಡ ಮಸರತ್ ಅಲಂ ತನ್ನ ಪ್ರತ್ಯೇಕತಾವಾದಿ ಹೋರಾಟವನ್ನು ಮುಂದುವರೆಸಿದ್ದು, ಭಾರತ ವಿರೋಧಿ ನಿಲುವು ತಳೆದಿರುವ ವ್ಯಕ್ತಿ. ಮುಸ್ಲೀಂ ಲೀಗ್ ಅಧ್ಯಕ್ಷನೂ ಆಗಿರುವ ಮಸರತ್ ಹಲವು ಉಗ್ರಗಾಮಿ ಸಂಘಟನೆಗಳಿಗೆ ಬೆನ್ನೆಲುಬಾಗಿದ್ದು, ಭಾರತದ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಲೇ ಬಂದಿದ್ದಾನೆ. ಇವನನ್ನು ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಬಂಧಿಸಿ ಕಾರಾಗೃಹದಲ್ಲಿಡಲಾಗಿತ್ತು. ಬಂಧನಕ್ಕೂ ಮೊದಲು ನಾಪತ್ತೆಯಾಗಿದ್ದ ಮಸರತ್ ಅಲಂ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು.
Advertisement