ಭಾರತ ಪಾಕಿಸ್ತಾನದ ನಂಬರ್ 1 ಶತ್ರು: ಉಗ್ರ ಹಫೀಜ್ ಸಯ್ಯೀದ್

ಭಾರತ ಪಾಕಿಸ್ತಾನದ ನಂಬರ್ 1 ಶತ್ರುವಾಗಿದ್ದು, ನಮ್ಮ ಮುಂದಿನ ಗುರಿ ಭಾರತವೇ ಎಂದು ಜಮಾತ್ ಉದ್ ದವಾ ಉಗ್ರ...
ಹಫೀಜ್ ಸಯ್ಯೀದ್
ಹಫೀಜ್ ಸಯ್ಯೀದ್

ಪೇಶಾವರ: ಭಾರತ ಪಾಕಿಸ್ತಾನದ ನಂಬರ್ 1 ಶತ್ರುವಾಗಿದ್ದು, ನಮ್ಮ ಮುಂದಿನ ಗುರಿ ಭಾರತವೇ ಎಂದು ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸಯೀದ್ ಹೇಳಿದ್ದಾನೆ.

ಭಾರತದ ವಿರುದ್ಧ ಪದೇ ಪದೇ ವಿಷಕಾರುತ್ತಿರುವ ಉಗ್ರ ಹಫೀಜ್ ಸಯೀದ್ ಮತ್ತೆ ಇಂದು ಭಾರತವನ್ನು ಗುರಿಯಾಗಿಸಿಕೊಂಡು ಕಿಡಿಕಾರಿದ್ದಾನೆ. ಪಾಕಿಸ್ತಾನದ ಪೇಶಾವರದಲ್ಲಿ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಹಫೀಜ್ ಸಯ್ಯೀದ್, ಭಾರತ ಪಾಕಿಸ್ತಾನದ ನಂಬರ್ 1 ಶತ್ರು ರಾಷ್ಟ್ರವಾಗಿದ್ದು, ಭಾರತದ ವಿರುದ್ದದ ಜಿಹಾದ್ ಸಾರುವವರಿಗೆ ತಾನು ಬೆಂಬಲ ಸೂಚಿಸುತ್ತೇನೆ ಎಂದು ಹೇಳಿದ್ದಾನೆ.

ಕೆಲವೇ ದಿನಗಳ ಹಿಂದಷ್ಟೇ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ್ದ ಉಗ್ರ ಹಫೀಜ್ ಸಯ್ಯೀದ್ ಕಾಶ್ಮೀರದಲ್ಲಿ ಪಾಕಿಸ್ತಾನ ಸೇನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಭಾರತದ ವಿರುದ್ಧ ಜಿಹಾದ್ ಸಾರಬೇಕು ಎಂದು ಹೇಳಿದ್ದ. ಚಾನೆಲ್ 24 ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ, ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ಸರ್ಕಾರವನ್ನು ತಾವು ಬೆಂಬಲಿಸುತ್ತಿದ್ದು, ಕಾಶ್ಮೀರದಲ್ಲಿ ಅವರು ಪ್ರಾಬಲ್ಯತೆ ಹೊಂದಲು ನೆರವಾಗಬೇಕು. ಆ ಮೂಲಕ ಕಾಶ್ಮೀರಿ ಪ್ರಜೆಗಳನ್ನು ಸ್ವತಂತ್ರರಾಗಿಸಬೇಕು ಎಂದು ಸಯ್ಯೀದ್ ಹೇಳಿದ್ದ.

ಪೇಶಾವರ ದಾಳಿಗೆ ಭಾರತ ಕಾರಣ ಎಂದು ಹೇಳಿದ್ದ
ಇನ್ನು ಕಳೆದ ವರ್ಷ 150 ಶಾಲಾಮಕ್ಕಳ ಸಾವಿಗೆ ಕಾರಣವಾಗಿದ್ದ ಪೇಶಾವರ ದಾಳಿಗೆ ಭಾರತವೇ ಕಾರಣ ಎಂದು ಹೇಳುವ ಮೂಲಕ ಹಫೀಜ್ ಸಯ್ಯೀದ್ ನಗೆಪಾಟಲಿಗೆ ಗುರಿಯಾಗಿದ್ದ. ಲಷ್ಕರ್ ಉಗ್ರರು ನಡೆಸಿದ್ದ ಈ ಕೃತ್ಯದಲ್ಲಿ ನೂರಾರು ಮಕ್ಕಳು, ಯೋಧರು ಸೇರಿದಂತೆ 150 ಮಂದಿ ಸಾವನ್ನಪ್ಪಿದ್ದರು. ಇನ್ನು ಹಲವು ಉಗ್ರಕೃತ್ಯಗಳಲ್ಲಿ ಪಾಲ್ಗೊಂಡಿರುವ ಮೋಸ್ಟ್ ವಾಂಟೆಡ್ ಉಗ್ರ ಹಫೀಜ್ ಸಯ್ಯೀದ್ ತಲೆಗೆ ಅಮೆರಿಕ ಸರ್ಕಾರ 10 ಮಿಲಿಯನ್ ಡಾಲರ್ ಹಣ ಘೋಷಣೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com