ರಾಯ್ ಪುರ: ಛತ್ತೀಸ್ ಗಡದಲ್ಲಿ ಮತ್ತೆ ನಕ್ಸಲರು ಹಾವಳಿ ಶುರುವಿಟ್ಟುಕೊಂಡಿದ್ದು, ಖಾಸಗಿ ಪ್ರಯಾಣಿಕ ಬಸ್ ವೊಂದನ್ನು ಸುಟ್ಟುಹಾಕಿದ್ದಾರೆ.
ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ದಾಂತೇವಾಡದಿಂದ ಸುಕ್ಮಾ ಜಿಲ್ಲೆಗೆ ತೆರಳುತ್ತಿದ್ದ ಬಸ್ ಅನ್ನು ಬಲವಂತವಾಗಿ ನಿಲ್ಲಿಸಿದ ಶಸ್ತ್ರ್ರ ಸಜ್ಜಿತ ನಕ್ಸಲರ ಗುಂಪು ನೋಡ ನೋಡುತ್ತಿದ್ದಂತೆಯೇ ಬಸ್ ಗೆ ಬೆಂಕಿ ಹಾಕಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವೊಬ್ಬ ಪ್ರಯಾಣಿಕರಿಗೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಸುಕ್ಮಾ ಜಿಲ್ಲೆಯ ಗಡಿ ಭಾಗದಲ್ಲಿರುವ ಚಿಂಗವರಮ್ ಗ್ರಾಮದ ಗಾದಿರಸ್ ಪೊಲೀಸ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ರಾಥೋಡ್ ಅವರು ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ ನಕ್ಸಲರ ವಿರುದ್ಧದ ಕೂಬಿಂಗ್ ಕಾರ್ಯಾಚರಣೆಗೂ ಚಾಲನೆ ನೀಡಿದ್ದು, ಶಸ್ತ್ರಸಜ್ಜಿತ ಭದ್ರತಾ ಪಡೆಗಳು ನಕ್ಸಲರಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
Advertisement