ಜೈಪುರ: 10 ವರ್ಷದ ಪುಟ್ಟ ಬಾಲಕ ಒಂದು ದಿನದ ಮಟ್ಟಿಗೆ ಜೈಪುರ ಪೊಲೀಸ್ ಆಯುಕ್ತನಾಗಿ ಕರ್ತವ್ಯ ನಿರ್ವಹಿಸಿದ್ದಾನೆ. ಹರ್ಯಾಣ ಮೂಲದ ಗಿರೀಶ್ ಶರ್ಮಾ ಒಂದು ದಿನದ ಮಟ್ಟಿಗೆ ಪೊಲೀಸ್ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸಿ ತನ್ನ ಆಸೆ ಈಡೇರಿಸಿಕೊಂಡಿದ್ದಾನೆ.
ಭವಿಷ್ಯದ ಬಗ್ಗೆ ಕಣ್ಣುಗಳಲ್ಲಿ ನೂರಾರು ಕನಸು ಹೊತ್ತ ಆ ಬಾಲಕನಿಗೆ ಸಾವು ಕಣ್ಮುಂದೆಯೇ ಸುಳಿದಾಡುತ್ತಿದೆ. ಆದರೆ ಇದ್ಯಾವುದರ ಪರಿವೆಯೇ ಇಲ್ಲದ ಈತ ಮುಂದೊಂದು ದಿನ ಪೊಲೀಸ್ ಕಮಿಷನರ್ ಆಗುವ ಆಸೆ ಇಟ್ಟುಕೊಂಡಿದ್ದಾನೆ. ಗಿರೀಶ್ ಶರ್ಮಾ. 10 ವರ್ಷದ ಬಾಲಕ ಕಿಡ್ನಿ ಸಂಬಂಧಿ ಮಾರಾಣಾಂತಿಕ ಕಾಯಿಲೆಯಿಂದ ನರಳುತ್ತಿದ್ದಾನೆ. ಆದರೆ ತಾನು ವಿದ್ಯಾವಂತನಾಗಿ ಪೋಲೀಸ್ ಕಮಿಷನರ್ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದಾನೆ.
ಮೇಕ್ ಎ ವಿಶ್ ಫೌಂಡೇಶನ್ ಎಂಬ ಸಂಘಟನೆ ಈತನ ಭವಿಷ್ಯದ ಕನಸನ್ನು ಒಂದು ದಿನದ ಮಟ್ಟಿಗೆ ನನಸು ಮಾಡಿದೆ. ಜೈಪುರ ಪೊಲೀಸ್ ಕಮಿಷನರ್ ರನ್ನು ಭೇಟಿ ಮಾಡಿದ ಸಂಘಟನೆ ಸಾವಿನೊಂದಿಗೆ ಹೋರಾಟ ಮಾಡುತ್ತಿರುವ ಬಾಲಕನ ಆಸೆ ನೆರವೇರಿಸುವಂತೆ ಮನವಿ ಮಾಡಿತು. ಇದಕ್ಕೆ ಒಪ್ಪಿದ ಆಯುಕ್ತ ಶ್ರೀನಿವಾಸ್ ರಾವ್ ಗಿರೀಶ್ ಶರ್ಮಾನ ಆಸೆ ಈಡೇರಿಸಿದ್ದಾರೆ.
ಐಪಿಎಸ್ ಅಧಿಕಾರಿಯ ಡ್ರೆಸ್ ಹಾಕಿದ್ದ ಗಿರೀಶ್ ಇತರ ಪೊಲೀಸ್ ಅಧಿಕಾರಿಗಳಿಂದ
ಸೆಲ್ಯೂಟ್ ಸ್ವೀಕರಿಸಿದ. ನಂತರ ಕಚೇರಿಗೆ ಬಂದು ಆಯುಕ್ತರ ಕುರ್ಚಿಯಲ್ಲಿ ಕುಳಿತು ಸಂತಸಗೊಂಡ. ಪೊಲೀಸ್ ಠಾಣೆಯಲ್ಲಿ ಹೇಗೆ ಕರ್ತವ್ಯ ನಿರ್ವಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಆತನನ್ನು ಸ್ಥಳೀಯ ಠಾಣೆಗೆ ಕರೆದೊಯ್ದು ವಿವರಣೆ ನೀಡಲಾಯ್ತು.
3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗಿರೀಶ್ ಗೆ ಸಮಾಜಕ್ಕೆ ಕಂಟಕವಾಗಿರುವ ಕಳ್ಳರನ್ನು ಹಿಡಿದು ತಕ್ಕ ಪಾಠ ಕಲಿಸುವ ಆಸೆ ಹೊಂದಿದ್ದಾನೆ. ಗಿರೀಶ್ ಕಾಯಿಲೆಯಿಂದ ಗುಣಮುಖನಾಗಿ ವಿದ್ಯಾಭ್ಯಾಸ ಪಡೆದು ತನ್ನ ಕನಸನ್ನು ನೆರವೇರಿಸಿಕೊಳ್ಳಲಿ ಎಂಬುದು ಎಲ್ಲರ ಆಶಯ.
Advertisement