ನವದೆಹಲಿ: ಗೋಹತ್ಯೆಗೆ ಬಹಿರಂಗವಾಗಿ ಬೆಂಬಲ ಸೂಚಿಸಿದರೆ ಬಹಳ ಕಾಲ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಸತ್ಯ ಮೊಘಲರಿಗೆ ತಿಳಿದಿತ್ತು. ಹೀಗಾಗಿಯೇ ಮೊಘಲರು ಎಂದಿಗೂ ಗೋಹತ್ಯೆಗೆ ಬಹಿರಂಗವಾಗಿ ಬೆಂಬಲ ಸೂಚಿಸಿರಲಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.
ರಾಷ್ಟ್ರೀಯ ಗೋಧನ್ ಮಹಾಸಂಘ ಆಯೋಜಿಸಿದ್ದ ಗೋವು ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಮೊಘಲರ ಬಗ್ಗೆ ನನಗೆ ತಿಳಿದಿರುವ ಮಾಹಿತಿಯ ಪ್ರಕಾರ, ಮೊಘಲರು ಎಂದಿಗೂ ಬಹಿರಂಗವಾಗಿ ಗೋಹತ್ಯೆಗೆ ಬೆಂಬಲ ಸೂಚಿಸಿರಲಿಲ್ಲ. ಬೆಂಬಲ ಸೂಚಿಸಿದರೆ ಹೆಚ್ಚು ಕಾಲ ಆಡಳಿತ ನಡೆಸಲು ಸಾಧ್ಯವಿಲ್ಲ ಎಂಬುದರ ಸತ್ಯವನ್ನು ಅವರು ಅರಿತಿದ್ದರು. ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕನಾದ ಬಾಬರ್ ಕೂಡ ತನ್ನ ವಿಲ್ ನಲ್ಲಿ ಒಂದೇ ಸಮಯದಲ್ಲಿ ಎರಡು ಕೆಲಸ ಮಾಡಲು ಸಾಧ್ಯವಿಲ್ಲ. ಒಂದು ಜನರ ಹೃದಯ ಗೆಲ್ಲುವ ಕೆಲಸ ಮಾಡಬೇಕು. ಇಲ್ಲವೇ ಗೋ ಮಾಂಸ ತಿನ್ನುವವರಿಗೆ ಬೆಂಬಲ ಸೂಚಿಸಬೇಕು ಬರೆದುಕೊಂಡಿದ್ದರು.
ಭಾರತ ಹಿಂದಿನಿಂದಲೂ ತನ್ನ ಸಂಸ್ಕೃತಿ ಪರಿಪಾಲನೆಗೆ ಸಾಕಷ್ಟು ಗೌರವವನ್ನು ನೀಡುತ್ತಿದೆ. ಬ್ರೀಟೀಷರು ಭಾರತಕ್ಕೆ ಬಂದಾಗ ಭಾರತೀಯ ಸಂಸ್ಕೃತಿ ಆಚರಣೆಗಳ ಗೌರವಕ್ಕೆ ಧಕ್ಕೆ ಬರಲು ಪ್ರಾರಂಭವಾಯಿತು. ಗೋ ಮಾಂಸಕ್ಕಾಗಿ ಸಾಕಷ್ಟು ಗೋವುಗಳನ್ನು ಬಲಿ ನೀಡಲಾಗುತ್ತಿತ್ತು. ಇದನ್ನು ಸಹಿಸದ ಭಾರತೀಯರು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜಾದರೂ. ಒಂದು ರೀತಿಯಲ್ಲಿ ಹೇಳಬೇಕಾದರೆ, ಸ್ವಾತಂತ್ರ್ಯ ಹೋರಾಟಕ್ಕೆ ಗೋಹತ್ಯೆಯೇ ಪ್ರಮುಖ ಕಾರಣವಾಯಿತು. ಇದರಿಂದಲೇ ತಿಳಿಯಬಹುದು ಭಾರತೀಯರು ಗೋವಿಗೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದನ್ನು ಎಂದು ಹೇಳಿದ್ದಾರೆ.
ಗೋಹತ್ಯೆಯನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಹಾಗೂ ಬಿಎಸ್ಎಫ್ ಯೋಧರು ಸಾಕಷ್ಟು ಶ್ರಮ ಪಡುತ್ತಿದ್ದು, ಇದೀಗ ಗೋ ಅಕ್ರಮ ಸಾಗಾಣಿಕೆ ಬಾಂಗ್ಲಾದೇಶದಲ್ಲಿ ಕಡಿಮೆಯಾಗತೊಡಗಿದೆ. ಅಧಿಕಾರಕ್ಕೆ ಬಂದಾಗ ಅಕ್ರಮ ಗೋಸಾಗಾಣೆಯಾಗುತ್ತಿರುವ ಇಂಡೋ-ಬಾಂಗ್ಲಾದೇಶದ ಗಡಿ ಪ್ರದೇಶಕ್ಕೆ ಮೊದಲು ಭೇಟಿ ನೀಡುವುದಾಗಿ ಆಲೋಚಿಸಿದ್ದೆ. ಅಕ್ರಮ ಗೋಸಾಗಾಣೆ ತಡೆಗಟ್ಟುವುದು ಬಹಳ ಕಷ್ಟ ಎಂಬುದು ತಿಳಿಯಿತು. ಹೀಗಾಗಿ ಅಕ್ರಮ ಗೋ ಸಾಗಾಣಿಕೆ ಕುರಿತಂತೆ ಹೋರಾಟ ಮಾಡಲಾಯಿತು. ಗೋ ರಕ್ಷಣೆಗಾಗಿ ಸರ್ಕಾರ ಇದೀಗ 500 ಕೋಟಿ ಹಣವನ್ನು ಮೀಸಲಿಟ್ಟಿದ್ದು, ಭಾರತೀಯ ಗೋ ತಳಿಗಾಗಿ ಈಗಾಗಲೇ ಎರಡು ಕೇಂದ್ರಗಳು ಸಂಶೋಧನೆ ನಡೆಸುತ್ತಿವೆ ಎಂದು ಹೇಳಿದ್ದಾರೆ.
Advertisement