ಬಿಹಾರ, ಹಿಮಾಚಲಕ್ಕೆ ಹೊಸ ರಾಜ್ಯಪಾಲರ ನೇಮಕ
ನವದೆಹಲಿ/ಪಟನಾ: ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ಬಿಹಾರಕ್ಕೆ ನೂತನ ರಾಜ್ಯಪಾಲರ ನೇಮಕವಾಗಿದೆ. ಹಿರಿಯ ಬಿಜೆಪಿ ನಾಯಕ ರಾಮನಾಥ್ ಕೋವಿಂದ್ (69) ಬಿಹಾರದ ರಾಜ್ಯಪಾಲರಾಗಿ ನೇಮಕಗೊಂಡಿದ್ದರೆ, ಹಿಮಾಚಲ ಪ್ರದೇಶಕ್ಕೆ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಮುಖ್ಯಸ್ಥ ಆಚಾರ್ಯ ದೇವವ್ರತ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಇದುವರೆಗೂ ಪಶ್ಚಿಮ ಬಂಗಾಳದ ರಾಜ್ಯಪಾಲ ಕೇಶ್ರಿನಾಥ್ ತ್ರಿಪಾಠಿ ಬಿಹಾರದ ಹೆ ಚ್ಚುವರಿ ರಾಜ್ಯಪಾಲರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು.
ಹಿಮಾಚಲಪ್ರದೇಶದಲ್ಲಿ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ಸಿಂಗ್ ಹೆಚ್ಚುವರಿ ಜವಾಬ್ದಾರಿ ಹೊತ್ತಿದ್ದರು. ರಾಷ್ಟ್ರಪತಿ ಭವನದ ಪತ್ರಿಕಾ ಹೇಳಿಕೆಯಿಂದ ನೂತನ ರಾಜ್ಯಪಾಲರ ನೇಮಕ ಆದೇಶ ಹೊರಬಿದ್ದಿದ್ದು ಅಧಿಕಾರ ಸ್ವೀಕರಿಸಿದ ದಿನದಿಂದ ಅವರ ಅವ„ಗಳು ಗಣನೆಗೆ ಬರಲಿವೆ.
ನಿತೀಶ್ ಅಸಮಾಧಾನ: ಬಿಹಾರ ರಾಜ್ಯಪಾಲರ ನೇಮಕ ವಿಚಾರ ಈಗ ಕೇಂದ್ರ ಮತ್ತು ರಾಜ್ಯದ ನಡುವೆ ಹೊಸ ತಿಕ್ಕಾಟಕ್ಕೆ ಎಡೆ ಮಾಡಿಕೊಟ್ಟಿದೆ. ರಾಜ್ಯಪಾಲರ ನೇಮಕ ವಿಚಾರ ನನಗೆ ಗೊತ್ತೇ ಇರಲಿಲ್ಲ. ಈ ಕುರಿತ ಸುದ್ದಿ ಸಿಕ್ಕಿದ್ದೇ ಮಾಧ್ಯಮದಿಂದ ಎಂದು ಮುಖ್ಯಮಂತ್ರಿ ನಿತೀಶ್ಕುಮಾರ್
ಹೇಳಿದ್ದಾರೆ.