ಪುಣೆ: ಹಿರಿಯ ಗಾಂಧಿವಾದಿ ಮತ್ತು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ 2ನೇ ಬಾರಿಗೆ ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಅವರಿಗೆ ನೀಡಲಾಗಿರುವ ಭದ್ರತೆಯನ್ನು "ಝಡ್ ಪ್ಲಸ್" ಶ್ರೇಣಿಗೇರಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಮಹಾರಾಷ್ಟ್ರ ಪೊಲೀಸ್ ಮೂಲಗಳ ಪ್ರಕಾರ ಕೇವಲ 10 ದಿನಗಳ ಅವಧಿಯಲ್ಲಿ ಅಣ್ಣಾ ಹಜಾರೆ ಅವರಿಗೆ 2ನೇ ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಪತ್ರದಲ್ಲಿ ಅಣ್ಣಾ ಹಜಾರೆ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗಿನ ನಂಟನ್ನು ಬಿಡದಿದ್ದರೆ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಅವರ ಸಹಾಯಕ ದತ್ತಾ ಅವಾರಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ ಆಗಸ್ಟ್ 7ರಂದು ಈ ಬೆದರಿಕೆ ಪತ್ರ ಬಂದಿದೆ ಎಂದು ಹೇಳಲಾಗುತ್ತಿದ್ದು, ಅರವಿಂದ್ ಕೇಜ್ರಿವಾಲ್ ರಂತಹ ಒರಟು ಸ್ವಭಾವದ ವ್ಯಕ್ತಿ ದೆಹಲಿ ಮುಖ್ಯಮಂತ್ರಿಯಾಗಲು ನೀವೇ ಕಾರಣ. ಹೀಗಾಗಿ ನೀವು ಅವರ ಒಡನಾಟದಿಂದ ದೂರ ಉಳಿದು, ತಮ್ಮ ಸ್ವಗ್ರಾಮ ರಾಲೇಗಣ ಸಿದ್ದಿಯಲ್ಲೇ ಉಳಿಯಬೇಕು. ಇಲ್ಲವಾದಲ್ಲಿ 2 ವರ್ಷಗಳ ಹಿಂದೆ ಹತರಾಗಿದ್ದ ವಿಚಾರವಾದಿ ನರೇಂದ್ರ ಧಾಬೋಳ್ಕರ್ ಮತ್ತು ಗೋವಿಂದ್ ಪನ್ಸಾರೆ ಅವರಂತೆಯೇ ನಿಮ್ಮನ್ನು ಕೊಲ್ಲಲಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ.
ಕೇವಲ 3 ದಿನಗಳ ಅವಧಿಯಲ್ಲಿ 2ನೇ ಬೆದರಿಕೆ ಪತ್ರ ಬಂದಿದ್ದು, ಪ್ರಕರಣ ಸಂಬಂಧ ಈಗಾಗಲೇ ಅಹ್ಮದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಐಪಿಸಿ ಸೆಕ್ಷನ್ 507 (ಬೆದರಿಕೆ) ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Advertisement