ನವದೆಹಲಿ: ಪಾಕಿಸ್ತಾನ ತನ್ನ ಉದ್ಧಟತನ ಮುಂದುವರೆಸಿರುವ ಹಿನ್ನೆಲೆಯಲ್ಲಿ ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆ(ಎನ್ಎಸ್ಎ)ಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು, ಉಭಯ ರಾಷ್ಟ್ರಗಳ ಮಧ್ಯೆ ಮೂರನೇ ವ್ಯಕ್ತಿಗೆ ಭಾರತ ಯಾವತ್ತು ಅವಕಾಶ ನೀಡಿಲ್ಲ. ಆದರೆ ಪಾಕಿಸ್ತಾನ ಪ್ರತ್ಯೇಕವಾದಿಗಳಿಗೆ ಆಹ್ವಾನಿ ನೀಡಿದ್ದು, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಗಡಿಯಲ್ಲಿ ಪಾಕಿಸ್ತಾನದ ಅಪ್ರಚೋದಿತ ದಾಳಿ ಹಾಗೂ ಇತ್ತೀಚಿಗೆ ಗಡಿಯಲ್ಲಿ ನಡೆದ ಉಗ್ರರ ದಾಳಿಯ ನಡುವೆಯೂ ಉಭಯ ರಾಷ್ಟ್ರಗಳ ಪ್ರಧಾನಿಗಳು ಎನ್ಎಸ್ಎ ಮಾತುಕತೆಗೆ ಒಪ್ಪಿಕೊಂಡಿದ್ದರು. ಈಗಲೂ ಭಾರತ ಸೌಹಾರ್ದಯುತ ಹಾಗೂ ಶಾಂತಿಯೂತ ಮಾತುಕತೆ ಬದ್ಧವಾಗಿದೆ ಎಂದು ಸ್ವರೂಪ್ ಹೇಳಿದ್ದಾರೆ.
ಭಾರತದ ವಿರೋಧದ ನಡುವೆಯೂ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಗೆ ಕಾಶ್ಮೀರಿ ಪ್ರತ್ಯೇಕವಾದಿಗಳಿಗೆ ಪಾಕಿಸ್ತಾನ ಆಹ್ವಾನ ನೀಡಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಭಾರತ ಪ್ರತ್ಯೇಕವಾದಿಗಳೊಂದಿಗೆ ಮಾತುಕತೆ ನಡೆಸಬಾರದು ಎಂದು ಸೂಚಿಸಿತ್ತು.
ಆದರೆ ತನ್ನ ಹಳೆ ಚಾಳಿಯನ್ನೇ ಮುಂದುವರೆಸಿದ ಪಾಕಿಸ್ತಾನ, ಭಾರತದ ಉಪದೇಶ ನಮಗೆ ಬೇಕಾಗಿಲ್ಲ. ಕಾಶ್ಮೀರಿ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.
Advertisement