ಯೋಗ ಕಲಿತ ಕೈದಿಗಳಿಗೆ ಶಿಕ್ಷೆಯಲ್ಲಿ ವಿನಾಯಿತಿ
ನವದೆಹಲಿ: ಪುಣೆಯ ಯರವಾಡ ಕಾರಾಗೃಹವಾಸಿಗಳಿಗೆ ಸಿಹಿಸುದ್ದಿ. ಇಲ್ಲಿ ಏರ್ಪಡಿಸಲಾದ ಯೋಗ ಪರೀಕ್ಷೆಗಳಲ್ಲಿ ಉನ್ನತ ಮಟ್ಟದ ಅಂಕಗಳನ್ನು ಗಳಿಸಿದ ಕೈದಿಗಳನ್ನು ಬೇಗನೆ ಬಿಡುಗಡೆ ಮಾಡಲಾಗುತ್ತದೆ.
ಮಹಾತ್ಮ ಗಾಂಧಿಯವರು ಎರಡು ಬಾರಿ ಕಾಲ ಕಳೆದಿದ್ದ ಈ ಜೈಲಿನಲ್ಲಿ ಯೋಗ ತರಬೇತಿಯನ್ನು ನಡೆಸಲಾಗುತ್ತಿದೆ. ಇದರ ಕೊನೆಯಲ್ಲಿ ನಡೆಸಲಾಗುವ ಪರೀಕ್ಷೆಗಳಲ್ಲಿ ಹೆಚ್ಚಿನ ಮಾಕ್ರ್ಸ್ ತೆಗೆದವರಿಗೆ ಅವರು ಶಿಕ್ಷಾವಧಿಯ ಮೂರು ತಿಂಗಳ ಮೊದಲೇ ಬಿಡುಗಡೆಯಾಗುವ ಕೊಡುಗೆಯನ್ನು ಜೈಲಿನ ನಿರ್ದೇಶಕರು ನೀಡಿದ್ದಾರೆ ಎಂದು `ದ ಟೆಲಿಗ್ರಾಫ್ ವರದಿ ಮಾಡಿದೆ.
ಯೋಗ ನಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯನ್ನು ಉತ್ತಮಪಡಿಸುತ್ತದೆ. ನಮ್ಮಲ್ಲಿರುವ ಹಿಂಸಾತ್ಮಕ ವರ್ತನೆಗಳನ್ನು ಹತ್ತಿಕ್ಕಿ ವರ್ತನೆಯನ್ನು ಸುಧಾರಿಸುತ್ತದೆ. ಉತ್ತಮ ನಡವಳಿಕೆಗೆ ಸರ್ಕಾರ ಶಿಕ್ಷಾವಧಿ ವಿನಾಯಿತಿ ನೀಡಿದೆ. ಹಾಗೇ ನಾವು ಯೋಗ ಸಾಧನೆಗೆ ಈ ವಿನಾಯಿತಿ ನೀಡುತ್ತಿದ್ದೇವೆ ಎಂದು ಜೈಲಿನ ನಿರ್ದೇಶಕರಾದ ಭೂಷಣ್ಕುಮಾರ್ ಉಪಾಧ್ಯಾಯ ಹೇಳಿದ್ದಾರೆ. ಆರು ತಿಂಗಳ ಈ ತರಬೇತಿಯ ಕೊನೆಯಲ್ಲಿ ಪ್ರಾಯೋಗಿಕ ಹಾಗೂ ಲಿಖಿತ ಪರೀಕ್ಷೆಗಳಿವೆ. ಜೈಲಿನ 1,500 ನಿವಾಸಿಗಳು ಭಾಗವಹಿಸಿದ್ದಾರೆ. ಇದು ದೇಶಾದ್ಯಂತ ಹಬ್ಬಲಿ ಎಂಬುದು ಉಪಾಧ್ಯಾಯ ಆಶಯ. ಈ ಅವಧಿ ವಿನಾಯಿತಿಗೆ ಇತರ ಉದ್ಯೋಗ ಯೋಜನೆಗಳಲ್ಲಿ ಕೈದಿಗಳು ತೋರಿಸುವ ಪ್ರಗತಿಯೂ ಪೂರಕವಾಗಿ ಪರಿಗಣಿಸಲ್ಪಡುತ್ತದೆ.
ಯರವಾಡ ಕಾರಾಗೃಹಕ್ಕೆ ಈ ಬಗೆಯ ಸುಧಾರಣಾ ಕ್ರಮಗಳ ಇತಿಹಾಸವೇ ಇದೆ. 2002ರಲ್ಲಿ ಗಾಂಧಿ ತತ್ವಗಳ ಕಲಿಕೆ ಏರ್ಪಡಿಸಲಾಗಿತ್ತು. ಒಂದು ವರ್ಷದ ಈ ಕೋರ್ಸ್ನ ನಂತರ ಮೂರನೇ ಎರಡು ಭಾಗ ಕೈದಿಗಳು ತಾವು ಎಸಗಿದ ಅಪರಾಧದ ಸಂತ್ರಸ್ತರ ಬಳಿ ಕ್ಷಮೆ ಯಾಚಿಸಲು ಸಿದ್ಧರಾಗಿದ್ದರು. ಜೈಲಿನೊಳಗಿನ ಹಿಂಸಾತ್ಮಕ ಘಟನೆಗಳು ಕಡಿಮೆಯಾಗಿದ್ದವು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ