ಅಣು ದುರಂತಕ್ಕೆ ವಿದೇಶಿ ಸಂಸ್ಥೆಗಳು ಬಾಧ್ಯಸ್ಥರಲ್ಲ!

ಅಮೆರಿಕ ಜತೆಗಿನ ಒಪ್ಪಂದದ ವಿವರ ಬಹಿರಂಗ ಅವಘಡಕ್ಕೆ ಘಟಕದ ನಿರ್ವಾಹಕರೇ ಹೊಣೆ...
ಅಣು ದುರಂತಕ್ಕೆ ವಿದೇಶಿ ಸಂಸ್ಥೆಗಳು ಬಾಧ್ಯಸ್ಥರಲ್ಲ!

ನವದೆಹಲಿ: ಅಮೆರಿಕ ಜತೆಗಿನ ಒಪ್ಪಂದದ ವಿವರ ಬಹಿರಂಗ ಅವಘಡಕ್ಕೆ ಘಟಕದ ನಿರ್ವಾಹಕರೇ ಹೊಣೆ ಗಣರಾಜ್ಯೋತ್ಸವ ಅತಿಥಿಯಾಗಿ ಬರಾಕ್ ಒಬಾಮ ಅವರ ನವದೆಹಲಿ ಭೇಟಿ ವೇಳೆ ಭಾರತ ಮತ್ತು ಅಮೆರಿಕ ನಡುವೆ ಅಂತಿಮಗೊಂಡ ಅಣು ಒಪ್ಪಂದದ ವಿವರವನ್ನು ಕೇಂದ್ರ ಸರ್ಕಾರ ಕೊನೆಗೂ ಬಹಿರಂಗಪಡಿಸಿದೆ.

ಈ ಒಪ್ಪಂದದಂತೆ ಇನ್ನು ಮುಂದೆ ಅಣು ದುರ್ಘಟನೆ ವೇಳೆ ಅಣುರಿಯಾಕ್ಟರ್ ಪೂರೈಕೆದಾರರ ಬದಲು ಆ ಘಟಕಗಳನ್ನು ನಿರ್ವಹಿಸುವ ಸಂಸ್ಥೆಗಳನ್ನಷ್ಟೇ ಸಂತ್ರಸ್ತರು ಬಾಧ್ಯರನ್ನಾಗಿ ಮಾಡಬಹುದು. ನಾಗರಿಕ ಪರಮಾಣು ಬಾಧ್ಯತಾ ಕಾಯ್ದೆ (ಸಿಎಲ್ಎನ್ಡಿ)ಯನ್ನು ಬದಲಾಯಿಸಲಾಗುವುದು ಅಥವಾ ತಿದ್ದುಪಡಿ ಮಾಡಲಾಗುವುದು ಎನ್ನುವ ಆರೋಪಗಳನ್ನು ಸರ್ಕಾರ ತಳ್ಳಿಹಾಕಿದೆ. ಅಂಥ ಯಾವುದೇ ಪ್ರಸ್ತಾವವಾಗಲಿ, ಅಗತ್ಯವಾಗಲಿ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಮೆರಿಕ ಪೂರೈಸಿದ ಅಣು ಇಂಧನವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ ಎನ್ನುವ ಕುರಿತು ನಿಗಾ ಇಡುವ ವಿಚಾರದಲ್ಲಿ ಭಾರತ ತನ್ನ ಹಿಂದಿನ ನಿಲುವನ್ನು ಸಡಿಲಿಸಿಲ್ಲ. ಅಂತಾರಾಷ್ಟ್ರೀಯ ಸುರಕ್ಷಾ ನಿಯಮ ಏನು ಹೇಳುತ್ತದೆಯೋ ಅದನ್ನೆಲ್ಲ ಪಾಲಿಸುವುದಾಗಿ ಭಾರತ ಹೇಳಿದೆ.

ಅಣು ದುರ್ಘಟನೆಯೇನಾದರೂ ಸಂಭವಿಸಿದರೆ ಸಂತ್ರಸ್ತರು ರಿಯಾಕ್ಟರ್ ಪೂರೈಕೆದಾರರ ಮೇಲೆ ಪ್ರಕರಣ ದಾಖಲಿಸುವಂತಿಲ್ಲ. ಆ ಘಟಕದ ನಿರ್ವಾಹಕನ ವಿರುದ್ಧವಷ್ಟೇ ಪ್ರಕರಣ ದಾಖಲಿಸಬಹುದು.ಭಾರತೀಯ ನಾಗರಿಕ ಪರಮಾಣು ಹಾನಿಗೆ ಸಂಬಂಧಿಸಿದ ಬಾಧ್ಯತಾ ಕಾಯ್ದೆ 2010ರ ಕಲಂ 46ರಲ್ಲೂ ಇದನ್ನೇ ಹೇಳಲಾಗಿ-ದೆ. ಮತ್ತು ಈ ನಿಯಮ ಅಂತಾರಾಷ್ಟ್ರೀಯ ಕಾನೂನುಗಳಿಗೂ ಅನುಗುಣವಾಗಿದೆ. ಅಂತಾರಾಷ್ಟ್ರೀಯ ಕಾನೂನುಗಳಂತೆ ಯಾವುದೇ ಅಣು ದುರ್ಘಟನೆ ವೇಳೆ ಘಟಕದ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯೇ ಅದಕ್ಕೆ ಬಾಧ್ಯಾಸ್ಥ.

ಈ ಒಪ್ಪಂದಕ್ಕಾಗಿ ಭಾರತದ ಕಾನೂನನಲ್ಲಿ ಯಾವುದೇ ಬದಲಾವಣೆಯಾಗಲಿ, ತಿದ್ದುಪಡಿಯನ್ನಾಗಲಿ ಮಾಡಿಲ್ಲ. ರಾಜ್ಯಸಭೆಯಲ್ಲಿ ವಿಧೇಯಕಕ್ಕೆ ಸಂಬಂಧಿಸಿ ನಡೆದ ಚರ್ಚೆಯ ವೇಳೆಯೂ ಪೂರೈಕೆದಾರರನ್ನೂ ಬಾಧ್ಯಸ್ಥರನ್ನಾಗಿ ಮಾಡಬೇಕೆನ್ನುವ ತಿದ್ದುಪಡಿಗೆ ಸಂಸತ್ತಿನಲ್ಲೇ ಸೋಲಾಗಿತ್ತು. ಆದರೆ, ಪೂರೈಕೆದಾರರನ್ನು ಘಟಕವನ್ನು ನಿರ್ವಹಿಸುವವರ ಮೂಲಕ ಬಾಧ್ಯಸ್ಥರನ್ನಾಗಿ ಮಾಡಬಹುದು. ಭಾರತೀಯ ನಾಗರಿಕ ಪರಮಾಣು ಹಾನಿಗೆ ಸಂಬಂಧಿಸಿದ ಬಾಧ್ಯತಾ ಕಾಯ್ದೆ 17ಬಿ ಅಧಿನಿಯಮದ ಅನುಕೂಲವನ್ನು ನಿರ್ವಾಹಕ ಪಡೆದುಕೊಳ್ಳಬಹುದು.

ಆದರೆ, ಈ ಅನುಕೂಲ ಪಡೆಯುವ ಆಯ್ಕೆ  ರಿಯಾಕ್ಟರ್ ಪೂರೈಕೆದಾರ ಮತ್ತು ಆಪರೇಟರ್ ನಡುವಿನ ಒಪ್ಪಂದಲ್ಲಿ ಸೇರ್ಪಡೆ ಮಾಡಬಹುದು ಅಥವಾ ಕೈಬಿಡಬಹುದು. ನಮ್ಮಲ್ಲಿ ನ್ಯೂಕ್ಲಿ-ಯರ್ ಪವರ್ ಕಾರ್ಪೋರೇಷನ್  ಆಫ್ ಇಂಡಿಯಾಲಿ.(ಎನ್ ಪಿಸಿಐಎಲ್) ಅಣು ಕೇಂದ್ರಗಳ ನಿರ್ವಹಣೆ ಮಾಡುತ್ತದೆ.ಕೇಂದ್ರ ಸರ್ಕಾರ ಹೇಳುವಂತೆ ಈ ಸಂಸ್ಥೆ ಒಪ್ಪಂದದ ವೇಳೆ ಈ ಆಯ್ಕೆಯನ್ನು ಪರಿಗಣಿಸಲಿದೆ.

ದುರ್ಘಟನೆಗಳನ್ನು ಗಮನದಲ್ಲಿಟ್ಟುಕೊಂಡೇ ಒಪ್ಪಂದದಲ್ಲಿ ರು.1500 ಕೋಟಿ ವಿಮೆ ಮಾಡಿಸಲಾಗಿದೆ. ಭಾರತೀಯ ಕಂಪನಿಗಳು ಮತ್ತು ಸರ್ಕಾರ ಸೇರಿಕೊಂಡು ಈ ವಿಮೆ ಮಾಡಿವೆ. ಆದರೆ, ಇದರ ಹೊರೆ ದೇಶದ ತೆರಿಗೆದಾರರ ಮೇಲೆ ಬೀಳುವುದಿಲ್ಲ.ನಾಗರಿಕ ಪರಮಾಣು ಹಾನಿ ಬಾಧ್ಯಾತಾ ಕಾಯ್ದೆ 2010ರ ಪ್ರಕಾರ ರು. 1500 ಕೋಟಿ ವಿಮೆ ಕಡ್ಡಾಯ. ಇದಕ್ಕಾಗಿ ಗ್ರಾಹಕರು ತಾವು ಬಳಸುವ ಪ್ರತಿ ಯುನಿಟ್ ವಿದ್ಯುತ್ ಗಾಗಿ ಒಂದಷ್ಟು ಪೈಸೆ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಹಾಗಾಗಿ ಗ್ರಾಹಕರಿಗೂ ಇದು ಹೊರೆಯನಿಸುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com