ಕೇಂದ್ರದಿಂದ ಎತ್ತಂಗಡಿಯಾಗಿದ್ದ ಸಂಜೀವ್, ದೆಹಲಿ ಭ್ರಷ್ಟಾಚಾರ ನಿಗ್ರಹ ವಿಭಾಗದ ಮುಖ್ಯಸ್ಥ
ನವದೆಹಲಿ: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದಿಂದ ಎತ್ತಂಗಡಿಯಾಗಿದ್ದ ದೆಹಲಿಯ ಉನ್ನತ ಭ್ರಷ್ಟಾಚಾರ ನಿಗ್ರಹ ಅಧಿಕಾರಿ ಸಂಜೀವ್ ಚತುರ್ವೇದಿ ಅವರನ್ನು ದೆಹಲಿ ಭ್ರಷ್ಟಾಚಾರ ನಿಗ್ರಹ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸುವ ಇರಾದೆಯನ್ನು ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 14ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಆಪ್ ಸರಕಾರ ರಚಿಸಿದ ಒಡನೆಯೇ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರನ್ನಾಗಿ ಸಂಜೀವ ಚತುರ್ವೇದಿ ಅವರನ್ನು ನೇಮಿಸುವ ಸಾಧ್ಯತೆಗಳು ಎನ್ನಲಾಗಿದೆ. ಆಮ್ ಆದ್ಮಿ ಸರಕಾರದ ಮೊದಲ ಆದ್ಯತೆಯೇ ಕೆಳ ಮಟ್ಟದ ಆಡಳಿತೆಯಲ್ಲಿರುವ "ರಿಶ್ವತ್ಖೋರಿ'ಗೆ (ಲಂಚಗುಳಿತನಕ್ಕೆ) ಲಗಾಮು ಹಾಕುವುದೇ ಆಗಿದೆ ಎಂದು ಕೇಜ್ರಿವಾಲ್ ಈಗಾಗಲೇ ಹೇಳಿದ್ದಾರೆ.
ಸಂಜೀವ್ ಚತುರ್ವೇದಿ ಅವರು ಓರ್ವ ಪ್ರಾಮಾಣಿಕ ಅಧಿಕಾರಿಯಾಗಿದ್ದು ಅವರು ನಮ್ಮನ್ನು ಸೇರಿಕೊಳ್ಳುವುದು ನಿಜಕ್ಕೂ ದೊಡ್ಡ ಸಂಗತಿಯಾಗಿದೆ ಎಂದು ಆಪ್ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಲಿರುವ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಚತುರ್ವೇದಿ ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಜಾಗೃತ ದಳದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾಗ ಅಲ್ಲಿನ ಭ್ರಷ್ಟಾಚಾರವನ್ನು ಹೊರಗೆಳೆದು ಕೇಂದ್ರದ ಕಂಗೆಣ್ಣಿಗೆ ಗುರಿಯಾಗಿ ಎತ್ತಂಗಡಿಯಾಗಿದ್ದರು. ಭಾರತೀಯ ಅರಣ್ಯ ಸೇವಾ ಅಧಿಕಾರಿಯಾಗಿ ಸರಕಾರಿ ಸೇವೆಗೆ ನಿಯುಕ್ತರಾಗಿದ್ದ ಚತುರ್ವೇದಿ ಅವರನ್ನು ಕೇಂದ್ರ ಸರಕಾರವು ಭ್ರಷ್ಟಾಚಾರ ಬಯಲುಗೊಳಿಸಿದ್ದಕ್ಕಾಗಿ ಬಲಿಪಶುವನ್ನಾಗಿ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಟೀಕಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ