
ಬೆಂಗಳೂರು: ದೇಶದಲ್ಲಿ ಆಂತರಿಕ ಭಧ್ರತೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋಇಂಡಿಯಾ-2015 ಏರ್ ಷೋ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಏರ್ ಶೋನಲ್ಲಿ ಭಾಗವಹಿಸುತ್ತಿರುವ ಎಲ್ಲ ಸಂಸ್ಥೆಗಳಿಗೂ ಸ್ವಾಗತಕೋರುತ್ತೇನೆ. ಬೆಂಗಳೂರು ಏರ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ಖುಷಿಯಾಗುತ್ತಿದೆ. ಭಾರತದಲ್ಲಿ ಉಧ್ಯಮ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿವೆ. ವಿಶ್ವದ ಅನೇಕ ರಾಷ್ಟ್ರಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ. ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಹೇರಳ ಅವಕಾಶಗಳಿವೆ. ಭಾರತದಲ್ಲಿ ಆಂತರಿಕ ಭದ್ರತೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಉಗ್ರರ ಉಪಟಳವನ್ನು ಸಮರ್ಥವಾಗಿ ಎದುರಿಸಬೇಕಿದೆ. ರಕ್ಷಣೆಯ ಸವಾಲುಗಳನ್ನು ಎದುರಿಸಲು ನಾವು ಇನ್ನಷ್ಟು ತಯಾರಿ ಮಾಡಿಕೊಳ್ಳಬೇಕಿದೆ.
ರಕ್ಷಣಾ ಇಲಾಖೆಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಬೇಕಿದೆ. ಶೇ.60ರಷ್ಟು ರಕ್ಷಣಾ ಸಾಮಗ್ರಿಗಳು ಭಾರತಕ್ಕೆ ಆಮದಾಗುತ್ತಿದ್ದು, ಭಾರತದಲ್ಲೇ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸುವ ಮೂಲಕ ಈ ಪ್ರಮಾಣವನ್ನು ಕಡಿಮೆಗೊಳಿಸುವತ್ತ ನಮ್ಮ ಚಿತ್ತ ಹರಿಸಬೇಕಿದೆ. ಆಮದು ಕಡಿಮೆಯಾದರೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಭಾರತೀಯ ಸೇನೆಯಲ್ಲಿ ಆಧುನೀಕರಣದ ಅಗತ್ಯತೆ ಇದ್ದು, ನಾವು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರಿನಲ್ಲಿ ಏರ್ ಶೋಗೆ ಬೇಕಾದ ಪೂರಕವಾದ ವಾತಾವರಣವಿದೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ 1940ರಲ್ಲಿ ಎಚ್ ಎಎಲ್ ನಿರ್ಮಾಣವಾಗಿತ್ತು. ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದೆ. ಬೆಂಗಳೂರಿನಲ್ಲಿ ಕೈಗಾರಿಕಾ ಸ್ನೇಹಿ ನಗರವಾಗಿದೆ. ಐಟಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ದೇಶದಲ್ಲೇ ಬೆಂಗಳೂರು ಅತಿವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಬೆಂಗಳೂರಿನಲ್ಲಿ ಹಲವು ಸಂಸ್ಥೆಗಳು ಹೂಡಿಕೆ ಮಾಡಿವೆ ಮತ್ತು ಹೂಡಿಕೆದಾರರಿಗೆ ಸೌಲಭ್ಯ ಒದಗಿಸಲು ನಾವು ಬದ್ಧ ಎಂದು ಸಿದ್ದರಾಮಯ್ಯ ಹೇಳಿದರು.
ಬೆಳಗ್ಗೆ 8.45ಕ್ಕೆ ಯಲಹಂಕದಲ್ಲಿರುವ ಸೇನಾ ವಾಯುನೆಲೆಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು, 9.20ಕ್ಕೆ ಏರೋ ಇಂಡಿಯಾ 2015ಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಕೇಂದ್ರ ಸಚಿವರಾದ ಅನಂತ್ ಕುಮಾರ್ ಮತ್ತು ಡಿವಿ ಸದಾನಂದಗೌಡ ಅವರು ಪಾಲ್ಗೊಡಿದ್ದಾರೆ.
Advertisement