ಚೆನ್ನೈ: ಶೈಕ್ಷಣಿಕ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳ ಉದ್ಯೋಗಾರ್ಹತೆಯ ಮೌಲ್ಯಮಾಪನ ಮಾಡಬೇಕು ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಸಂಸ್ಥೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರು ಹೇಳಿದ್ದಾರೆ.
ಚೆನ್ನೈನಲ್ಲಿ ನಡೆಯುತ್ತಿರುವ 3ನೇ ಆವೃತ್ತಿಯ ThinkEdu ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಭು ಚಾವ್ಲಾ ಅವರು, ಶಿಕ್ಷಣ ಸಂಸ್ಥೆಗಳು ಕೌಶಲ್ಯಭರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು. 'ಇಡೀ ವಿಶ್ವದಲ್ಲೇ ಭಾರತದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಉನ್ನತ ಶಿಕ್ಷಣವನ್ನು ಬೋಧಿಸುತ್ತಿರುವುದು ನಿಜ. ಆದರೆ ಅಲ್ಲಿ ಗುಣಮಟ್ಟದ ಶಿಕ್ಷಣವನ್ನು ಬೋಧಿಸಲಾಗುತ್ತಿದೆಯೇ ಎಂಬುದೇ ಪ್ರಶ್ನೆ ಎಂದು ಹೇಳಿದರು.
ಇದೇ ವೇಳೆ ದುಬಾರಿ ಶಾಲಾ ಶಿಕ್ಷಣದ ಕುರಿತು ಮಾತನಾಡಿದ ಅವರು, ಕಾಲೇಜು ಶಿಕ್ಷಣಕ್ಕಿಂತಲೂ ಶಾಲಾ ಶಿಕ್ಷಣ ದುಬಾರಿಯಾಗಿರುವ ವಿಶ್ವದ ಕೆಲವೇ ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದು. ಭಾರತದಲ್ಲಿನ ಶಾಲೆಗಳು ಶಿಕ್ಷಣ ನೀತಿಯ ಬಗ್ಗೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ. ಶಿಕ್ಷಣ ನೀತಿ ಅಳವಡಿಸಿಕೊಳ್ಳುವುದರಲ್ಲಿ ತಮಿಳುನಾಡು ರಾಜ್ಯ ಯಶಸ್ವಿಯಾಗಿದ್ದು, ಇದೇ ರೀತಿಯ ಯಶಸ್ಸು ಸಾಧಿಸುವಲ್ಲಿ ದೇಶದ ಇತರೆ ರಾಜ್ಯಗಳು ವಿಫಲವಾಗುತ್ತಿವೆ ಎಂದು ಚಾವ್ಲಾ ಹೇಳಿದರು.
ಶಿಕ್ಷಣದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳ ಕುರಿತಂತೆ ಮಾತನಾಡಿದ ಚಾವ್ಲಾ ಅವರು, ಕೌಶಲ್ಯಭರಿತ ಶಿಕ್ಷಣ ಮತ್ತು ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ದೇಶದಲ್ಲಿ ಅಗತ್ಯವಿರುವಷ್ಟು ನುರಿತ ಕೌಶಲ್ಯಭರಿತ ಕಾರ್ಮಿಕ ಸಮುದಾಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಇದರ ಕುರಿತ ವಿಚಾರವನ್ನೇ ಪ್ರಸಕ್ತ ಅವೃತ್ತಿಯ ThinkEdu ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಕೇಂದ್ರ ಸಚಿವ ಹರ್ಷವರ್ಧನ್, ಪ್ರಭು ಚಾವ್ಲಾ ಮತ್ತು ನಿವೃತ್ತ ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಇಂದು ಮತ್ತು ನಾಳೆ ThinkEdu ಕಾರ್ಯಕ್ರಮ ನಡೆಯಲಿದೆ.
Advertisement