ನವದೆಹಲಿ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅದೆಷ್ಟೋ ಮಹತ್ವದ ಯೋಜನೆಗಳು ಇದೀಗ ಧೂಳು ಕೊಡವಿ ಎದ್ದು ಕುಳಿತಿವೆ.ಸುಮಾರು 4 ಸಾವಿರ ಹೆಕ್ಟೇರ್ ವ್ಯಾಪ್ತಿಯ ಪ್ರಧಾನ (ಸೂಕ್ಷ್ಮ) ಅರಣ್ಯ ಪ್ರದೇಶದಲ್ಲಿ 45 ಯೋ ಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್ಬಿಡಬ್ಲ್ಯುಎಲ್) ಒಪ್ಪಿಗೆ ನೀಡಿದೆ. ಮೂರು ತಿಂಗಳ ಹಿಂದೆ ಅರಣ್ಯ ಸಲಹಾ ಸಮಿತಿಯಿಂದ ಅನುಮೋದನೆ ಪಡೆದಿದ್ದ ಪ್ರಮುಖ ಯೋಜನೆಗಳಲ್ಲಿ ಇದೀಗ 45ಕ್ಕೆ ಒಪ್ಪಿಗೆ ಕೊಟ್ಟಿರುವ ಎನ್ಬಿಡಬ್ಲ್ಯುಎಲ್ ಮತ್ತೆ ಕೆಲವನ್ನು ಇನ್ನಷ್ಟು ಪೂರಕ ಮಾಹಿತಿ ನೀಡುವಂತೆ ವಾಪಸ್ ಕಳುಹಿಸಿದೆ. ಈ ಮೂಲಕ ಶೇ. 75 ಯೋಜನೆಗಳಿಗೆ ಹಸಿರು ನಿಶಾನೆ ದೊರಕಿದ್ದು, ಶೀಘ್ರ ಕಾಮಗಾರಿ ಕೈಗೊಳ್ಳಬಹುದಾಗಿದೆ. ದೇಶದ ಕೆಲವು ಅರಣ್ಯ ಪ್ರದೇಶಗಳಲ್ಲಿ ಹಲವಾರು ವನ್ಯಜೀವಿಗಳ ಸಂತತಿಯು ವಿನಾಶದ ಅಂಚಿನಲ್ಲಿರುವುದರಿಂದ ಅನುಮತಿಯನ್ನು ನಿರಾಕರಿಸಲಾಗುತ್ತಿತ್ತು. ಇದೀಗ ಎನ್ಡಿಎ ಸರ್ಕಾರ ಈ ಪ್ರದೇಶಗಳಲ್ಲಿ ವಿಶೇಷ ವನ್ಯಜೀವಿ ರಕ್ಷಣೆ ಪದ್ದತಿ ಅಳವಡಿಸುವುದಾಗಿ ಘೋಷಿಸಿದೆ. ಕೆಲವು ಷರತ್ತಿನ ಮೇಲೆ ಒಪ್ಪಿಗೆ ಕೊಟ್ಟಿರುವ ಎನ್ಬಿಡಬ್ಲ್ಯುಎಲ್, ಪರಿಸರ ಸೂಕ್ಷ್ಮ ವಲಯಗಳ ವ್ಯಾಪ್ತಿಯಲ್ಲಿ ಬರುವ ವನ್ಯಜೀವಿಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜತೆಗೆ ಆ ಪ್ರದೇಶಗಳ ವ್ಯಾಪ್ತಿಯಿಂದ ದೂರವಿರಬೇಕೆಂಬ ಎಚ್ಚರಿಕೆಯನ್ನೂ ನೀಡಿದೆ.
Advertisement