ತಮ್ಲುಕ್ (ಪೂರ್ವ ಮಿಡ್ನಾಪುರ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಗೆ ಕಪಾಳ ಮೋಕ್ಷ ಮಾಡಿದ c ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ತೃಣಮೂಲ ಕಾಂಗ್ರೆಸ್ನ ಮುಖಂಡರಾಗಿರುವ ಅಭಿಷೇಕ್ ಬ್ಯಾನರ್ಜಿ ನಿನ್ನೆ ಮಧ್ಯಾಹ್ನ ಚಂಡಿಪುರ್ನ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಫೋಟೋ ತೆಗೆಸಿಕೊಳ್ಳುವ ನೆಪವೊಡ್ಡಿ ವೇದಿಕೆ ಮೇಲೆ ಬಂದ ದೆಬಾಶಿಶ್ ಆಚಾರ್ಯ ಎಂಬಾತ ಇದ್ದಕ್ಕಿದ್ದಂತೆ ಅಭಿಷೇಕ್ ಬ್ಯಾನರ್ಜಿ ಅವರ ಕೆನ್ನೆಗೆ ಬಲವಾಗಿ ಹೊಡೆದಿದ್ದ. ವೇದಿಕೆ ಮೇಲಿದ್ದ ಟಿಎಂಸಿ ಸದಸ್ಯರು ಹಾಗೂ ಕಾರ್ಯಕರ್ತರು ಕೂಡಲೇ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆಚಾರ್ಯನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ನಡೆಯುವುದಕ್ಕೂ ಕೆಲವು ನಿಮಿಷಗಳ ಹಿಂದಷ್ಟೇ ಆರೋಪಿ ಆಚಾರ್ಯನ ಜೊತೆಗೆ ಇಬ್ಬರು ವ್ಯಕ್ತಿಗಳು ಕಂಡು ಬಂದಿದ್ದರು ಎಂದು ತಿಳಿದು ಬಂದಿದೆ. ಆಚಾರ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಆಚಾರ್ಯ ಮಾನಸಿಕ ರೋಗದಿಂದ ಬಳಲುತ್ತಿದ್ದು, ಉದ್ದೇಶ ಪೂರ್ವಕವಾಗಿ ಈ ಕೃತ್ಯವನ್ನು ಆತ ಮಾಡಿಲ್ಲ ಎಂದು ಆಚಾರ್ಯ ತಂದೆ ಹೇಳಿದ್ದಾರೆ. ಆಚಾರ್ಯ ವಿರುದ್ಧ ಈಗಾಗಲೇ ಮಾನನಷ್ಟ ಮೊಕದ್ದಮೆ, ಲೂಟಿ ಹಾಗೂ ಸಂಸದನ ಮೇಲೆ ಹಲ್ಲೆ ನಡೆಸಿರುವುದಕ್ಕಾಗಿ ಪ್ರತ್ಯೇಕವಾಗಿ ಮೂರು ಪ್ರಕರಣ ದಾಖಲಾಗಿದೆ.