ನವದೆಹಲಿ: ಅಕ್ರಮ ಕಟ್ಟಡ ಕಾಮಗಾರಿಯನ್ನು ನಿಲ್ಲಿಸಲು ಮುಂದಾದ ಅಧಿಕಾರಿಗೆ ಬಿಜೆಪಿ ಕೌನ್ಸಿಲರ್ ಕಪಾಳಮೋಕ್ಷ ಮಾಡಿದ್ದಾರೆ.
ದಕ್ಷಿಣ ದೆಹಲಿಯಲ್ಲಿ ಅಕ್ರಮವಾಗಿ ಕಟ್ಟದ ನಿರ್ಮಾಣ ಮಾಡಲಾಗುತ್ತಿದ್ದು, ಇದನ್ನು ನಿಲ್ಲಿಸಲು ಮುಂದಾದ ದೆಹಲಿಯ ಪೌರ ಕಿರಿಯ ಇಂಜಿನಿಯರ್ಗೆ ಕೌನ್ಸಿಲರ್ ನೀರಜ್ ಗುಪ್ತ ಕಪಾಳಕ್ಕೆ ಹೊಡೆದಿರುವ ದೃಶ್ಯಗಳು ಕ್ಯಾಮರಗಳಲ್ಲಿ ಸೆರೆಯಾಗಿದೆ.
ದೆಹಲಿಯ ಸಂಗಮ್ ವಿಹಾರ್ನ ಕೌನ್ಸಿಲರ್ ನೀರಜ್ ಗುಪ್ತ ಇಂಜಿನಿಯರ್ ಮೇಲೆ ಮತ್ತೊಮ್ಮೆ ಕೈ ಮಾಡಲು ಮುಂದಾದಾಗ ಸ್ಥಳೀಯರೆ ಅವರನ್ನು ತಡೆದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಜಾಗವಿಲ್ಲ. ಸಾರ್ವಜನಿಕ ಪ್ರತಿನಿಧಿಯಾಗಿ ಈ ರೀತಿ ಮಾಡಬಾರದಾಗಿತ್ತು ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಹೇಳಿದ್ದಾರೆ.
ಫೆಬ್ರವರಿ 7 ರಂದು ದೆಹಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಈ ಪ್ರಕರಣವನ್ನು ತಮ್ಮ ದಾಳವನ್ನಾಗಿ ಬಳಸಿಕೊಳ್ಳಲು ರಾಜಕೀಯ ಪಕ್ಷಗಳು ಮುಂದಾಗಿವೆ.
ಈ ಘಟನೆಯನ್ನು ಖಂಡಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್, ಬಿಜೆಪಿಗೆ ಏನು ಬೇಕು? ಬಿಜೆಪಿ ಹಿಂಸೆಯ ಮೂಲಕ ಚುನಾವಣೆಯನ್ನು ಗೆಲ್ಲಬಹುದು ಎಂದು ಭಾವಿಸಿದರೆ ಅದು ಅವರ ಮೂರ್ಖತನ ಎಂದು ಕಿಡಿಕಾರಿದ್ದಾರೆ.
Advertisement