ಫೈಜಾಬಾದ್: ನಮ್ಮದು ರಾಮಭಕ್ತ ಸರ್ಕಾರ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಆಯೋಧ್ಯೆ ಬಳಿ ರಸ್ತೆ ಕಾಮಗಾರಿ ಯೋಜನೆಯೊಂದನ್ನು ಉದ್ಘಾಟಿಸಿ ಮಾತನಾಡಿದ ನಿತಿನ್ ಗಡ್ಕರಿ ಅವರು, 'ನಮ್ಮದು ರಾಮಭಕ್ತ ಸರ್ಕಾರ ಮತ್ತು ರಾಮಜಪ ಮಾಡುವವರಿಗಾಗಿ ಇರುವ ಸರ್ಕಾರ' ಎಂದು ಹೇಳಿದ್ದಾರೆ.
'ನಮ್ಮದು ರಾಮಭಕ್ತ ಸರ್ಕಾರವಾಗಿದ್ದು, ಆಯೋಧ್ಯೆಯಿಂದ ಚಿತ್ರಕೂಟದವರೆಗೂ ಇರುವ ರಾಮಭಕ್ತರಿಗಾಗಿ ಇರುವ ಸರ್ಕಾರ' ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಇದೇ ವೇಳೆ ಆಯೋಧ್ಯೆಯಿಂದ ನೇಪಾಳದ ಜನಕಪುರಿಗೆ ಸಂಪರ್ಕ ಕಲ್ಪಿಸುವ ರಾಮ್-ಜಂಕಿ ಮಾರ್ಗ್ಗೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಗಡ್ಕರಿ ಘೋಷಣೆ ಮಾಡಿದರು.
ಈ ರಸ್ತೆ ಸಂಪರ್ಕ ಯೋಜನೆಗೆ ಸುಮಾರು 2 ಸಾವಿರ ಕೋಟಿ ಖರ್ಚಾಗಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಗಡ್ಕರಿ ಹೇಳಿದರು. ರಾಮನ ಪತ್ನಿ ಸೀತೆ ಇದೇ ಜನಕಪುರಿಯಲ್ಲಿ ಜನಿಸಿದಳು ಎಂಬ ಪ್ರತೀತಿ ಇದೆ.
ವಿವಾದಾತ್ಮಕ ಹೇಳಿಕೆಗಳಿಂದ ದೂರ ಉಳಿಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕ್ಯಾಬಿನೆಟ್ ಸಚಿವರಿಗೆ ಮತ್ತು ಬಿಜೆಪಿ ಸಂಸದರಿಗೆ ಕಿವಿಮಾತು ಹೇಳಿದ್ದರೂ, ಸಹ ಬಿಜೆಪಿ ಸಂಸದರ ಮತ್ತು ಸಚಿವರು ಮಾತ್ರ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಎನ್ಡಿಎ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುತ್ತಿದೆ.
ಈ ಹಿಂದೆ ಬಿಜೆಪಿ ಸಂಸದ ಯೋಗಿ ಆದಿತ್ಯಾನಾಥ್ ಅವರು ಘರ್ವಾಪಸಿ ಪ್ರಕರಣ ಸಂಬಂಧ ಮತ್ತು ಸಂಸದ ಸಾಕ್ಷಿ ಮಹಾರಾಜ್ ಅವರು ಹಿಂದುತ್ವ ರಕ್ಷಣೆಗಾಗಿ ನಾಲ್ಕು ಮಕ್ಕಳು ಹೆರುವ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು.
Advertisement