ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ಶುಕ್ರವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ದೆಹಲಿ ಚುನಾವಣೆ ದಿನಕಳೆದಂತೆ ರಂಗೇರುತ್ತಿದ್ದು, ಕಾಂಗ್ರೆಸ್ ಪಕ್ಷ ಇಂದು ತನ್ನ ಮೊದಲ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮತದಾರರನ್ನು ತನ್ನತ್ತ ಸೆಳೆಯಲು ಹಲವು ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದ್ದು, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬತರಾಗಿರುವ ಅಜಯ್ ಮಕೇನ್ ಅವರು ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಪ್ರಣಾಳಿಕೆಯಲ್ಲಿ ಮುಖ್ಯವಾಗಿ ವಿದ್ಯುತ್ ಮತ್ತು ನೀರಿನ ಸಮಸ್ಯೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ವಿದ್ಯುತ್ ಮತ್ತು ನೀರಿಗೆ ಶೇ. 50ರಷ್ಟು ಸಬ್ಸಿಡಿ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಇದಲ್ಲದೆ ಯಮುನಾನದಿ ಸ್ವಚ್ಛಗೊಳಿಸುವ ಯೋಜನೆ, ವಿಧಾನಸಭೆಯ ಆವರಣದಲ್ಲಿ ಉಚಿತ ಸೈಬರ್ ಕೇಂದ್ರ ಸ್ಥಾಪನೆಯಂತಹ ಅಂಶಗಳನ್ನು ಘೋಷಣೆ ಮಾಡಲಾಗಿದೆ. ಇನ್ನು ಮಹಿಳೆಯರ ಸುರಕ್ಷತೆಗಾಗಿ ದೆಹಲಿಯಾದ್ಯಂತ ಸಿಸಿಟಿವಿ ಅಳವಡಿಕೆ ಮತ್ತು ಸಿವಿಲ್ ಡಿಫೆನ್ಸ್ಗೆ ಹೆಚ್ಚಿನ ಒತ್ತು, ಸಾರಿಗೆಯಲ್ಲಿ ವೈಫೈ ಸೇವೆ ಆರಂಭಿಸುವುದಾಗಿ ಹೇಳಲಾಗಿದೆ.
ಇನ್ನು ದೆಹಲಿ ಜನತೆಯ ಬಹುದಿನಗಳ ಕನಸು ಮೆಟ್ರೋ 4ನೇ ಘಟಕದ ಕಾರ್ಯಾರಂಭಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುತ್ತದೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.
Advertisement