ಕ್ರಿಕೆಟ್ ಕೊಲೆ: ಆರೋಪಿಗಳ ಬಂಧನ

ಬನ್ನೇರುಘಟ್ಟ ರಸ್ತೆ ಬಸವನಪುರ ವೀವರ್ಸ್ ಕಾಲೋನಿಯಲ್ಲಿ ಕಳೆದ ಭಾನುವಾರ ಕ್ರಿಕೆಟ್ ಆಡುವ ವೇಳೆ...
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಬೆಂಗಳೂರು: ಬನ್ನೇರುಘಟ್ಟ ರಸ್ತೆ ಬಸವನಪುರ ವೀವರ್ಸ್ ಕಾಲೋನಿಯಲ್ಲಿ ಕಳೆದ ಭಾನುವಾರ ಕ್ರಿಕೆಟ್ ಆಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಕೊಲೆ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆಯ

ಜೆ.ಪಿ.ನಗರ 8ನೇ ಹಂತ ನಿವಾಸಿಗಳಾದ ವೇಲು (20), ವೈ.ಆರ್.ಎಸ್.ಕಣ್ಣನ್ (20), ಸಂತೋಷ್ (19), ಬನ್ನೇರುಘಟ್ಟ ಸಮೀಪದ ಬಿಲ್ಲವರದಹಳ್ಳಿ ನಿವಾಸಿಗಳಾದ ವಿನೋದ್(19), ಹಾಗೂ ಮಂಜುನಾಥ(22) ಬಂಧಿತರು. ಕಳೆದ ಭಾನುವಾರ (ಜ.18) ವೀವರ್ಸ್ ಕಾಲೋನಿ ಆಟದ ಮೈದಾನದಲ್ಲಿ ಕಲ್ಕೆರೆ ನಿವಾಸಿ ರಾಜೇಶ್ ಅಲಿಯಾಸ್ ಗುಂಡ(24) ಎಂಬಾತನ ಕೊಲೆಯಾಗಿತ್ತು. ಘಟನೆಯಲ್ಲಿ ಶಿವು ಹಾಗೂ ಬಾಲಾಜಿ ಎಂಬುವರಿಗೆ ಇರಿತದ ಗಾಯಗಳಾಗಿದ್ದವು. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೋ ಬಾಲ್‌ನಿಂದ ಕೊಲೆ

ನಗರದ ಹಲವೆಡೆ ಕೆಲಸ ಮಾಡುವ ಬಿಲ್ಲವರದಹಳ್ಳಿ ಹಾಗೂ ಕಲ್ಕೆರೆ ಗ್ರಾಮದ ಯುವಕರು ಭಾನುವಾರ ಮಧ್ಯಾಹ್ನ ಕ್ರಿಕೆಟ್ ಆಡಲು ಬಂದಿದ್ದರು. ಎರಡು ಗ್ರಾಮಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಬಿಲ್ಲವರದಹಳ್ಳಿ ಗ್ರಾಮದ ವಿನೋದ್ ಬೌಲಿಂಗ್ ಮಾಡುತ್ತಿದ್ದ. ಈ ವೇಳೆ ಕಲ್ಕೆರೆ ಗ್ರಾಮದ ಯುವಕರು ಬ್ಯಾಟಿಂಗ್ ಮಾಡುತ್ತಿದ್ದದರು. ಅದೇ ಗ್ರಾಮದ ಯುವಕನೇ ಅಂಪೈರಿಂಗ್ ಮಾಡುತ್ತಿದ್ದ.

ವಿನೋದ್ ನೋಬಾಲ್ ಎಸೆದಿದ್ದರಿಂದ, ಅಂಪೈರ್ ನೋ ಬಾಲ್ ಎಂದು ಹೇಳಿದ್ದ. ಆದರೆ, ಅದಕ್ಕೋಪ್ಪದ ವಿನೋದ್ ಹಾಗೂ ಆತನ ತಂಡ ಬಾಲ್ ಸರಿಯಾಗಿದೆ ಎಂದು ವಾದ ಮಾಡಿದ್ದರು. ಇದರೊಂದಿಗೆ ಎರಡು ತಂಡಗಳ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ವಿನೋದ್ ಹಾಗೂ ತಂಡ, ಕಲ್ಲೆಕೆರೆಯ ರಾಜೇಶನಿಗೆ ಚಾಕುವಿನಿಂದ ಇರಿದಿದ್ದರು. ಬಿಡಿಸಲು ಬಂದ ಶಿವು ಹಾಗೂ ಬಾಲಾಜಿಗೂ ಇರಿದು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com