ಹವಾಲ ಮೂಲಕ 2ಜಿ ಹಣ ರವಾನೆ
ಮುಂಬೈ: ಯುಪಿಎ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ 2ಜಿ ಹಗರಣದೊಂದಿಗೆ ನಂಟು ಹೊಂದಿರುವ ಭಾರಿ ಪ್ರಮಾಣದ ಹವಾಲ ಅಕ್ರಮ ವಹಿವಾಟನ್ನು ಜಾರಿ ನಿರ್ದೇಶನಾಲಯ ಬಯಲಿಗೆಳೆದಿದೆ.
ಸುಮಾರು ರು. 10 ಸಾವಿರ ಕೋಟಿ 2ಜಿ ಹಗರಣದ ಲಂಚ ಹಣವನ್ನು ದುಬೈಗೆ ರವಾನೆ ಮಾಡಲಾಗಿದ್ದು ಇದು ಅತಿದೊಡ್ಡ ಹವಾಲ ಅಕ್ರಮ ವಹಿವಾಟು ಎಂದು ಮೂಲಗಳು ಹೇಳಿವೆ.
ಈ ಪ್ರಕರಣದಲ್ಲಿ ಖಾಸಗಿ ಬ್ಯಾಂಕ್ಗಳು ಸಹ ಕೈಮಿಲಾಯಿಸಿವೆ ಎಂಬ ವರದಿಗಳಿದ್ದು ಈ ಕುರಿತೂ ತನಿಖೆ ನಡೆಯುತ್ತಿದೆ. ಮಾಜಿ ಕೇಂದ್ರ ಸಚಿವ ಎ.ರಾಜಾ 2
ಹಗರಣದ ಹಣವನ್ನು ಹವಾಲ ಮೂಲಕ ವಿದೇಶಕ್ಕೆ ರವಾನಿಸಲು ಚೆನ್ನೈ ಮೂಲದ ಕಂಪನಿ ಜೆಪಿ ಗ್ರೂಪ್ ಸಹಕರಿಸಿದೆ. ದುಬೈ ಮೂಲದ ಕಂಪನಿ ಮೈಕಾನ್ ಜನರಲ್ ಟ್ರೇಡಿಂಗ್ ಕಂಪನಿಹಗೆ ಈ ಹಣವನ್ನು ಕಳಿಸಲಾಗಿದೆ. ಹಾಂಕಾಂಗ್ ಸೇರಿದಂತೆ ತೆರಿಗೆ ಸ್ವರ್ಗಗಳೆನಿಸಿದ ಇತರ ದೇಶಗಳಿಗೂ ಹಣ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ. 2012-13ರಲ್ಲಿ ಭಾರತದ ಗುಪ್ತಚಾರ ಸಂಸ್ಥೆ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ಆರ್ಎಡಬ್ಲ್ಯು) ನೀಡಿದ ಕೆಲವು ಮಾಹಿತಿಗಳ ಆಧಾರದ ಮೇಲೆ ಈ ತನಿಖೆಯನ್ನು ಜಾರಿ ನಿರ್ದೇಶನಾಲಯ ಕೈಗೊಂಡಿದೆ. ಸೂರತ್ ಮೂಲದ ವಜ್ರ ವ್ಯಾಪಾರ ಕಂಪನಿಯೊಂದು ನಡೆಸುತ್ತಿರುವ ಬೃಹತ್ ಹವಾಲ ಜಾಲದ ಕುರಿತು ಅಹಮದಾಬಾದ್ ನ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದಾಗ ಈ ಹಗರಣ ಬೆಳಕಿಗೆ ಬಂದಿದೆ. ರು. 10 ಸಾವಿರ ಕೋಟಿಗಳನ್ನು ಅಕ್ರಮವಾಗಿ ದುಬೈಗೆ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದ ಸಾಕ್ಷಿಗಳು ಜಾರಿ ನಿರ್ದೇಶನಾಲಯಕ್ಕೆ ಸಿಕ್ಕಿದೆ.
ಇತ್ತೀಚೆಗೆ ಅಹಮದಾಬಾದ್ ಜಾರಿ ನಿರ್ದೇಶನಾಲಯ ಘಟಕ ಹವಾಲ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಫ್ರೋಜ್ ಘಟ್ಟಾ, ಮದಲ್ ಲಾಲ್ ಜೈನ್ , ಮನೀಷ್ ಷಾ ಮತ್ತು ರಾಕೇಶ್ ಕೊಥಾರಿರನ್ನು ಬಂಧಿಸಿದೆ. ಮನ್ಸೂಕ್ಲಾಲ್ ಸಿಂಘ್ವಿ ಮತ್ತು ದಿಲ್ರಾಜ್ ಜೈನ್ ಎಂಬುವರು ತಲೆ ಮರೆಸಿಕೊಂಡಿದ್ದು ವಾರೆಂಟ್ ಜಾರಿ ಮಾಡಲಾಗಿದೆ. ಈ ಹಗರಣದ ಪ್ರಮುಖ ವ್ಯಕ್ತಿ ಎಂದು ಹೇಳಲಾಗಿರುವ ಪೃಥ್ವಿರಾಜ್ ಕೊಥಾರಿಯನ್ನು ಬಂಧಿಸಲು ಜಾರಿ ನಿರ್ದೇಶನಾಲಯ ಬಲೆ ಬೀಸಿದೆ. ಪೃಥ್ವಿರಾಜ್ ಕೊಥಾರಿ ವೃದ್ಧಿಸಿದ್ಧಿ ಬುಲಿಯನ್ ಕಂಪನಿ ಮಾಲೀಕನಾಗಿದ್ದು ಬೃಹತ್ ಹವಾಲ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ವರದಿಗಳು ಹೇಳಿವೆ