ಮುಂಬೈ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಮನೆ ಹಾಗೂ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಮಂಗಳವಾರ ದಾಳೆ ನಡೆಸಿದ್ದು, ದಾಳಿ ವೇಳೆ ಹಲವಾರು ಕಡತಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿರುವ ತೀಸ್ತಾ ಸೆಟಲ್ವಾಡ್ ಅವರು ವಿದೇಶಿ ಮೂಲಗಳಿಂದ ಅಕ್ರಮವಾಗಿ ದೇಣಿಗೆ ಪಡೆದಿರುವ ಆರೋಪ ಎದುರಿಸುತ್ತಿದ್ದು, ಅವರ ವಿರುದ್ಧ (ಎಫ್ ಇಆರ್ ಎ) ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ಅಧಿಕಾರಿಗಳು, ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ತೀಸ್ತಾ ಸೆಟಲ್ವಾಡ್ ಅವರ ಗೃಹ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಸಿಬಿಐ ದಾಳಿ ಖಂಡಿಸಿದ ತೀಸ್ತಾ ಸೆಟಲ್ವಾಡ್
ಏಕಾಏಕಿ ಸಿಬಿಐ ದಾಳಿ ನಡೆಸಿರುವುದನ್ನು ಖಂಡಿಸಿರುವ ತೀಸ್ತಾ ಸೆಟಲ್ವಾಡ್ ಅವರು, ಪ್ರಕರಣ ಸಂಬಂಧ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿ ಸಿಬಿಐ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಆದರೂ, ಸಿಬಿಐ ಅಧಿಕಾರಿಗಳು ಏಕಏಕಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಸಿಬಿಐ ಅಧಿಕಾರಿಗಳು ಮನೆಗೆ ಬಂದಾದ ಆಶ್ಚರ್ಯವಾಯಿತು. ಸಿಬಿಐ ಅಧಿಕಾರಿಗಳ ಈ ವರ್ತನೆ ಹಾಗೂ ಇದರ ಹಿಂದಿರುವ ಪಿತೂರಿ ಏನು ಎಂಬುದು ಅರ್ಥವಾಗುತ್ತಿಲ್ಲ. ಸಿಬಿಐ ದಾಳಿಯೊಂದು ಪೂರ್ವಾನಿಯೋಜಿತ ದಾಳಿಯಾಗಿದೆ. ಪಂಜರದಲ್ಲಿರುವ ಗಿಣಿಯ ಸುತ್ತ ಕಾರ್ಯಾಚರಣೆ ನಡೆಯುವಂತೆ ಇದೀಗ ನನ್ನ ಸುತ್ತಲೂ ರಾಜಕೀಯ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ನಮ್ಮನ್ನು ಅವಮಾನಿಸುವ ಹಾಗೂ ಹೆದರಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ಇದಕ್ಕೆ ನಾವು ಕುಗ್ಗುವುದಿಲ್ಲ ಎಂದು ಹೇಳಿದ್ದಾರೆ.
Advertisement