ಭೂಮಿ ನುಂಗುವ ಬಿಜೆಪಿ ಯೋಜನೆಗೆ ಕಾಂಗ್ರೆಸ್ ಅವಕಾಶ ಕೊಡಲ್ಲ: ರಾಹುಲ್ ಗಾಂಧಿ
ಜೈಪುರ: ದೇಶದ ಜನತೆಯ ಭೂಮಿ ನುಂಗಲು ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಹವಣಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜಸ್ತಾನಕ್ಕೆ 2 ದಿನಗಳ ಭೇಟಿ ನೀಡಿರುವ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದರು. ಬಡವರ ಹಕ್ಕುಗಳನ್ನು ಕಿತ್ತುಕೊಳ್ಳಲು ಬಿಜೆಪಿ ಯೋಚನೆ ರೂಪಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ಗೋಡೆಯಂತೆ ಅಡ್ಡ ನಿಂತು ಬಡವರನ್ನು ರಕ್ಷಿಸುತ್ತದೆ ಎಂದು ಹೇಳಿದರು.
ಜನರ ಅನುಮತಿಯಿಲ್ಲದೇ ಒಂದಿಂಚು ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಕಾಂಗ್ರೆಸ್ ಬಿಡುವುದಿಲ್ಲ. ಕೇವಲ ರಾಜಸ್ತಾನ ಮಾತ್ರವಲ್ಲದೇ ಇಡಿ ದೇಶದ ಜನರ ರಕ್ಷಣೆಗೆ ಕಾಂಗ್ರೆಸ್ ನಿಲ್ಲುತ್ತದೆ ಎಂದು ಜನತೆಗೆ ರಾಹುಲ್ ಗಾಂಧಿ ಆಶ್ವಾಸನೆ ನೀಡಿದರು.
ರಾಜಸ್ತಾನದ ಕೆಂಚಿಯನ್ ನಿಂದ ಕೋತ್ ವಾಳಿ ಗ್ರಾಮದವರೆಗೆ ಸುಮಾರು 5 ಕಿಮೀ ಪಾದಯಾತ್ರೆ ಹಮ್ಮಿಕೊಂಡಿರುವ ರಾಹುಲ್ ಗಾಂಧಿ ಸ್ಥಳೀಯರ ಸಮಸ್ಯೆ ಆಲಿಸಲಿದ್ದಾರೆ. ಇನ್ನು ಜುಲೈ 17 ರಂದು ಬಿರ್ಲಾ ಆಡಿಟೋರಿಯಂ ನಲ್ಲಿ ನಡೆಯುವ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ