21 ಲಕ್ಷ ಕೋಟಿಗೇರಿದ ವೇಶ್ಯಾವಾಟಿಕೆ ವಹಿವಾಟು..!

ಸಾಮಾಜಿಕವಾಗಿ ನಿಷೇಧಿಸಲ್ಪಟ್ಟಿರುವ ಮಾಸದಂಧೆ (ವೇಶ್ಯಾವಾಟಿಕೆ) ವಹಿವಾಟು ಭಾರತದಲ್ಲಿ ಎಗ್ಗಿಲ್ಲದೇ ಸಾಗುತ್ತಿದ್ದು, ಅದರ ವಹಿವಾಟು ಬರೊಬ್ಬರಿ 21 ಲಕ್ಷ ಕೋಟಿಗಳಿಗೇರಿರುವ ಆಘಾತಕಾರಿ ಅಂಶ....
ಕೈಲಾಶ್ ಸತ್ಯಾರ್ಥಿ (ಸಂಗ್ರಹ ಚಿತ್ರ)
ಕೈಲಾಶ್ ಸತ್ಯಾರ್ಥಿ (ಸಂಗ್ರಹ ಚಿತ್ರ)

ಚೆನ್ನೈ: ಸಾಮಾಜಿಕವಾಗಿ ನಿಷೇಧಿಸಲ್ಪಟ್ಟಿರುವ ಮಾಸದಂಧೆ (ವೇಶ್ಯಾವಾಟಿಕೆ) ವಹಿವಾಟು ಭಾರತದಲ್ಲಿ ಎಗ್ಗಿಲ್ಲದೇ ಸಾಗುತ್ತಿದ್ದು, ಅದರ ವಹಿವಾಟು ಬರೊಬ್ಬರಿ 21 ಲಕ್ಷ ಕೋಟಿಗಳಿಗೇರಿರುವ  ಆಘಾತಕಾರಿ ಅಂಶವನ್ನು ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ ವರದಿ ಹೊರಹಾಕಿದೆ.

ಕೈಲಾಶ್ ಸತ್ಯಾರ್ಥಿ ಅವರ "ಗ್ಲೋಬಲ್ ಮಾರ್ಚ್ ಎಗೇನ್ಸ್ಟ್ ಚೈಲ್ಡ್ ಲೇಬರ್" (Global March Against Child Labour) ವರದಿಯಿಂದಾಗಿ ಈ ಆಘಾತಕಾರಿ ಅಂಶ ಬೆಳಕಿಗೆ  ಬಂದಿದೆ. ಮಾಸದಂಧೆಯನ್ನು ನಿಯಂತ್ರಿಸಲು ಸಾಕಷ್ಟು ರಕ್ಷಣಾ ಪ್ರಯತ್ನಗಳು ನಡೆದಿವೆಯಾದರೂ, ಈ ದಂಧೆಯಲ್ಲಿರುವ ಬಹುತೇಕ ಮಹಿಳೆಯರು ಮತ್ತು ಮಕ್ಕಳನ್ನು ಗುರುತಿಸಿ ಅವರನ್ನು  ಸಾಮಾನ್ಯ ಜೀವನಕ್ಕೆ ಮರಳುವಂತೆ ಮಾಡುವುದು ಬಹಳ ಕಷ್ಟಕರ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಅಲ್ಲದೆ ಈ ದಂಧೆಯಲ್ಲಿ ತೊಡಗಿರುವವರ ಪೈಕಿ ಶೇ.93ರಷ್ಟು ಮಂದಿ  ಜೀವನದಲ್ಲಿ ಜಿಗುಪ್ಸೆಗೆ ತುತ್ತಾಗಿ ತೀರಾ ಚಿಕ್ಕ ವಯಸ್ಸಿನಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತಂಡದ ಸದಸ್ಯೆ ಇಸಾಬೆಲ್ ಎಂಬುವವರು, "ಈ ದಂಧೆಯಲ್ಲಿರುವ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಅಕ್ರಮ ಕಳ್ಳ ಸಾಗಣೆದಾರರಿಂದ  ಮೋಸಕ್ಕೆ ಒಳಗಾದವರೇ ಆಗಿದ್ದಾರೆ. ಹೆಚ್ಚು ಸಂಬಳ ನೀಡುವುದಾಗಿ ಹೇಳಿ ಅವರನ್ನು ನಂಬಿಸಿ ಕರೆತಂದು ಈ ದಂಧೆಯಲ್ಲಿ ಬಿಡಲಾಗುತ್ತಿದೆ. ಶಾಲಾಮಕ್ಕಳು ಕೂಡ ಈ ದಂಧೆಯಲ್ಲಿ  ಪಾಲ್ಗೊಂಡಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೆಲವರು ಸಿನಿಮಾದಲ್ಲಿ ಅಭಿನಯಿಸುವುದಕ್ಕಾಗಿ ಬಂದು ಈ ದಂಧೆಯ ಮೋಸಗಾರರಿಗೆ ಬಲಿಯಾಗಿದ್ದರೆ, ಮತ್ತೆ ಕೆಲವರು ಈ ದಂಧೆಯ  ನೆಟ್ ವರ್ಕ್ ನಲ್ಲಿರುವ ಯುವಕರ ಪ್ರೇಮ ಪಾಶಕ್ಕೆ ಸಿಲುಕಿ ಮೋಸಹೋಗಿದ್ದಾರೆ" ಎಂದು ಹೇಳಿದ್ದಾರೆ.

"ಮಾಂಸದಂಧೆ ತನ್ನದೇ ಆದ ಅನಾರೋಗ್ಯಕರ ಪ್ರಪಂಚವನ್ನು ಸೃಷ್ಟಿಸಿಕೊಂಡಿದೆ. ಒಮ್ಮೆ ಈ ಪ್ರಪಂಚವನ್ನು ಪ್ರವೇಶಿಸಿದರೆ ಮತ್ತೆ ಹಿಂದುರುಗುವುದು ಬಹಳ ಕಷ್ಟ. ಹೆಚ್ಚು ಹಣ ಗಳಿಕೆ  ಮಾಡಬಹುದು ಎಂಬ ಆಸೆಯಲ್ಲಿ ಸಾಕಷ್ಟು ಮಂದಿ ಈ ದಂಧೆಗೆ ಪ್ರವೇಶ ಮಾಡುತ್ತಾರೆ. ಆರಂಭದಲ್ಲಿ ಇದರಿಂದ ಹೆಚ್ಚು ಹಣ ಕೂಡ ಗಳಿಕೆ ಮಾಡಬಹುದು. ಆದರೆ ಕ್ರಮೇಣ ಇದು ಚಟವಾಗಿ  ಪರಿಣಮಿಸಿ ಹೋಗುತ್ತದೆ. ಒಮ್ಮೆ ಈ ದಂಧೆಗೆ ಪ್ರವೇಶ ಮಾಡಿ ಬಳಿಕ ಬಿಟ್ಟು ಬರುತ್ತೇನೆ ಎಂದರೂ ಅಷ್ಟು ಸುಲಭವಾಗಿ ಬಿಟ್ಟು ಬರಲು ಸಾಧ್ಯವಿಲ್ಲ. ಹಾಗೆ ಬಿಟ್ಟು ಬಂದರೂ ಸಮಾಜ  ಇಂಥಹವರನ್ನು ಸುಲಭವಾಗಿ ಸ್ವೀಕಾರ ಮಾಡುವುದಿಲ್ಲ. ಹೀಗಾಗಿ ಇಂತಹ ಮಹಿಳೆಯರು ಸಮಾಜದಲ್ಲಿ ಸಾಕಷ್ಟು ಕಷ್ಟಕರ ಅನುಭವಗಳನ್ನು ಎದುರಿಸುತ್ತಾರೆ. ಹೀಗಾಗಿ ಮತ್ತೆ ತಮ್ಮ ಹಳೆಯ  ಜೀವನಕ್ಕೆ ಅವರು ಮರಳುವಂತಾಗುತ್ತದೆ. 100ರಲ್ಲಿ ಕೇವಲ ಒಬ್ಬರು ಮಾತ್ರ ಇದರಲ್ಲಿ ಯಶಸ್ವಿಯಾಗಬಲ್ಲರು" ಎಂದು ಇಸಾಬೆಲ್ ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳು ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಎಲ್ಲ ಪೋಷಕರು ತಮ್ಮ ಮಕ್ಕಳ ಬಗ್ಗೆ ಹಾಗೂ ಅವರ ಚಟುವಟಿಕೆಗಳ ಬಗ್ಗೆ ಗಮನ ಹರಿಸುವುದು ಅತ್ಯವಶ್ಯಕ. ಪ್ರಮುಖವಾಗಿ  ಎಲ್ಲ ಪೋಷಕರು ತಮ್ಮ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ಯಾವುದೇ ವಿಚಾರಗಳ ಬಗ್ಗೆ ಚರ್ಚಿಸುವಷ್ಟು ಸ್ನೇಹಮಯ ವಾತಾವರಣ ನಿರ್ಮಾಣ ಮಾಡಬೇಕು. ಪ್ರಮುಖವಾಗಿ  ಮಧ್ಯಪಾನ ಮಾಡುವ ಪೋಷಕರು ಪರೋಕ್ಷವಾಗಿ ತಮ್ಮ ಮಕ್ಕಳು ಮಾಂಸದಂಧೆಯತ್ತ ಮುಖ ಮಾಡುವಂತೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com