ಕಲ್ಲಿದ್ದಲು ಹಗರಣ: ವಿದೇಶಕ್ಕೆ ತೆರಳಲು ಜಿಂದಾಲ್ ಗೆ ಅನುಮತಿ ನೀಡಿದ ನ್ಯಾಯಾಲಯ

ಕಲ್ಲಿದ್ದಲು ಹಂಚಿಕೆ ಹಗರಣ ಆರೋಪಿ, ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್ ಅವರಿಗೆ ವಿದೇಶಕ್ಕೆ ತೆರಳಲು ಸಿಬಿಐ ವಿಶೇಷ ನ್ಯಾಯಾಲಯವು ಶುಕ್ರವಾರ ಅನುಮತಿ ನೀಡಿದೆ...
ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್
ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್

ನವದೆಹಲಿ: ಕಲ್ಲಿದ್ದಲು ಹಂಚಿಕೆ ಹಗರಣ ಆರೋಪಿ, ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್ ಅವರಿಗೆ ವಿದೇಶಕ್ಕೆ ತೆರಳಲು ಸಿಬಿಐ ವಿಶೇಷ ನ್ಯಾಯಾಲಯವು ಶುಕ್ರವಾರ ಅನುಮತಿ ನೀಡಿದೆ.

ಏ.30ರಂದು ನಡೆದ ವಿಚಾರಣೆ ವೇಳೆ ಸಿಬಿಐ ಅಧಿಕಾರಿಗಳು ನವೀನ್ ಜಿಂದಾಲ್ ಪಾಸ್ ಪೋರ್ಟ್ ವಶಪಡಿಸಿಕೊಂಡಿರದ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯವು ಎಲ್ಲಾ ಪ್ರಕರಣಗಳಲ್ಲೂ ಅಧಿಕಾರಿಗಳು ಒಂದೇ ರೀತಿಯ ಮಾನದಂಡ ಅನುಸರಿಸಬೇಕೆಂಬ ನಿರ್ದೇಶನವನ್ನು ನೀಡಿ ವಿಚಾರಣೆಯನ್ನು ಮೇ.6ಕ್ಕೆ ಮೂಂದೂಡಿತ್ತು.

ಇದರಂತೆ ಇಂದು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭರತ್ ಪರಶರ್ ಅವರು, ವಿದೇಶಕ್ಕೆ ಹೋಗಲು ಅನುಮತಿ ನೀಡಿ ಪಾಸ್ ಪೋರ್ಟ್ ನ್ನು ವಶಪಡಿಸಿಕೊಳ್ಳದಂತೆ ಜಿಂದಾಲ್ ಮಾಡಿದ್ದ ಮನವಿಯನ್ನು ಸ್ವೀಕರಿಸಿದ್ದು, ವ್ಯವಹಾರ ಸಂಬಂಧ ಜೂನ್ 14 ರಿಂದ ಜೂನ್ 29 ರವರೆಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ.

ವಿಚಾರಣೆ ವೇಳೆ ನ್ಯಾಯಾಧೀಶರು ಕಲ್ಲಿದ್ದಲು ಪ್ರಕರಣ ಸಂಬಂಧ ರಾಜಿಯಾಗುವಂತೆ ಆಮಿಷ ತೋರಿಸಲು ಬಂದ ವ್ಯಕ್ತಿಯ ಕುರಿತಂತೆ ಮಾತನಾಡಿದ್ದು, ಪ್ರಕರಣದಲ್ಲಿ ರಾಜಿಯಾಗುವಂತೆ ಹಣದಾಸೆ ತೋರಿಸಲು ಬಂದ ವ್ಯಕ್ತಿ ವಕೀಲನಲ್ಲ, ಬದಲಾಗಿ ಜಿಂದಾಲ್ ಸಂಸ್ಥೆಗೆ ಸೇರಿದ ವ್ಯಕ್ತಿಯೆಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ರೀತಿಯ ಪ್ರಯತ್ನಗಳ ನ್ಯಾಯಾಲಯ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಈ ರೀತಿಯ ಪ್ರಯತ್ನ ಮತ್ತೊಮ್ಮೆ ಕಂಡು ಬಂದರೆ ಮುಂದಿನ ದಿನಗಳಲ್ಲಿ ನ್ಯಾಯಾಲಯವು ಕಠಿಣ ಕೈಗೊಳ್ಳಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದ್ದಾರೆ. ಆದರೆ, ವಿಚಾರಣೆ ವೇಳೆ ಆಮಿಷ ತೋರಿಸಿದ ವ್ಯಕ್ತಿ ಯಾರೆಂಬುದನ್ನು ನ್ಯಾಯಾಧೀಶರು ಬಹಿರಂಗಪಡಿಸಿಲ್ಲ.

ಜೂನ್ 1 ರಂದು ನಡೆದ ವಿಚಾರಣೆ ವೇಳೆ ನ್ಯಾಯಾಧೀಶರು ಕಲ್ಲಿದ್ದಲು ಪ್ರಕರಣ ಸಂಬಂಧ ರಾಜಿಯಾಗುವಂತೆ ವ್ಯಕ್ತಿಯೊಬ್ಬ ಹಣದಾಸೆ ತೋರಿಸಿದ್ದನು ಎಂದು ನ್ಯಾಯಾಧೀಶರು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com