ಪಾಟ್ನಾ: ಜನತಾ ಪರಿವಾರದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ರಾಷ್ಟ್ರೀಯ ಜನತಾ ದಳ(ಆರ್ಜೆಡಿ)ದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು, ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಮನೆಗೆ ಕಳುಹಿಸುವುದು ಖಚಿತ ಎಂದು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಲಾಲು, ಬಿಹಾರ ವಿಧಾನಸಭೆ ಚುನಾವಣೆಗಾಗಿ ನೇರಂದ್ರ ಮೋದಿ ನೇತೃತ್ವದ ಬಿಜೆಪಿ ಮೊದಲು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿ ಎಂದಿದ್ದಾರೆ.
ಇದೇ ವೇಳೆ ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತಿಶ್ ಕುಮಾರ್ ಜತೆ ಮೈತ್ರಿ ಮಾಡಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಲಾಲು, ಹಿಂದೆ ನಿತಿಶ್ ಕುಮಾರ್ ಅವರು ಬಿಜೆಪಿ-ಆರ್ಎಸ್ಎಸ್ ಕ್ಯಾಂಪ್ ಸೇರಿದ್ದಕ್ಕಾಗಿ ನಾವು ಅವರನ್ನು ಟೀಕಿಸಿದ್ದೇವು ಎಂದರು.
'ಲಾಲು ಮತ್ತು ನಿತಿಶ್ ಒಟ್ಟಾಗಿ ಬಿಹಾರ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಬಿಜೆಪಿಗೆ ಘರ್ ವಾಪಸಿ' ಖಚಿತ ಎಂದು ಆರ್ಜೆಡಿ ಮುಖ್ಯಸ್ಥ ಹೇಳಿದ್ದಾರೆ.
ನಿನ್ನೆಯಷ್ಟೇ ನಿತಿಶ್ ಕುಮಾರ್ ಅವರನ್ನು ಆರ್ಜೆಡಿ ಹಾಗೂ ಜೆಡಿಯು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.
Advertisement