ಬೆಂಗಳೂರು: ಲೈಂಗಿಕ ಕಾರ್ಯಕರ್ತೆಯ ಬಳಿ ಚಿನ್ನಾಭರಣ ದೋಚುವ ಉದ್ದೇಶದಿಂದ ದೈಹಿಕ ಸಂಪರ್ಕ ಪಡೆಯುವ ನೆಪದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಗೋಡಿಯಲ್ಲಿ ವಾಸವಿದ್ದ ಕೇರಳ ಮೂಲದ ಅಜಯ್(24 ) ಹಾಗೂ ಬಸ್ರುದ್ದೀನ್(45 ) ಬಂಧಿತರು. ಹೊಸ ರಸ್ತೆ ಚನ್ನಕೇಶವ ನಗರ 2 ನೇ ಕ್ರಾಸ್ ನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದ ಲೈಂಗಿಕ ಕಾರ್ಯಕರ್ತೆ ಅಖಿಲಾಂಡೇಶ್ವರಿ(38 ) ಎಂಬಾಕೆಯನ್ನು ಉಸಿರುಗಟ್ಟಿಸಿ ಕೊಲೆಗೈದು ಚಿನ್ನ ಲೇಪಿತ ನಕಲಿ ಒಡವೆಗಳನ್ನು ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡು ಮೂಲದ ಅಖಿಲಾಂಡೇಶ್ವರಿ ವಿವಾಹಿತಳಾಗಿದ್ದು ಹಲವು ವರ್ಷಗಳ ಹಿಂದೆಯೇ ಪತಿಯನ್ನು ತೊರೆದು ಬೆಂಗಳೂರಿಗೆ ಬಂದು ನೆಲೆಸಿದ್ದಳು, ಇಲ್ಲಿನ ವಿ.ಕೃಷ್ಣಪ್ಪ ಎಂಬುವವರಿಗೆ ಸೇರಿದ ಮನೆಯಲ್ಲಿ ಬಾಡಿಗೆ ವಸವಿದ್ದಳು. ಬಾಡಿಗೆ ಪಡೆಯಲು ಮನೆಯ ಮಾಲೀಕರು ಜೂ.2 ರಂದು ಅಖಿಲಾಂಡೇಶ್ವರಿ ಮನೆಗೆ ಬಂದಿದ್ದರು. ಆದರೆ ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು ಅಲ್ಲದೇ ಒಳಗಿನಿಂದ ವಾಸನೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣಪ್ಪ, ನೆರೆಹೊರೆಯವರನ್ನು ವಿಚಾರಿಸಿದಾಗ ನಾಲ್ಕೈದು ದಿನಗಳಿಂದ ಮನೆಗೆ ಬೀಗ ಹಾಕಲಾಗಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಟಕಿಯಿಂದ ನೋಡಿದಾಗ ಅಖಿಲಾಂಡೇಶ್ವರಿ ಶವ ಕೊಳೆತ ಸ್ಥಿತಿಯಲ್ಲಿ ಸಿಕ್ಕಿತ್ತು. ಕೂಡಲೇ ಕೃಷ್ಣಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಲವರನ್ನು ತನಿಖೆಗೆ ಒಳಪಡಿಸಿದ್ದರು.
ಮೇ.29 ರಂದು ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಬಂದಿದ್ದನ್ನು ಗಮನಿಸಿದ್ದ ನೆರೆಹೊರೆಯವರು, ಪೊಲೀಸರಿಗೆ ಈ ವಿಷಯ ತಿಳಿಸಿದ್ದರು. ಸ್ಥಳೀಯರು ನೀಡಿದ ಮಾಹಿತಿಯನ್ನಾಧರಿಸಿ ತನಿಖೆ ಮುಂದುವರೆಸಿದ ಪೊಲೀಸರು, ಅಜಯ್ ಹಾಗೂ ಬಸ್ರುದ್ದೀನ್ ನನ್ನು ಬಂಧಿಸಿದ್ದಾರೆ.
ಅಜಯ್ ಹಾಗೂ ಬಸ್ರುದ್ದೀನ್ ಇಬ್ಬರಿಗೂ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದರು. ಹೇಗಾದರೂ ದುಡ್ಡು ಸಂಪಾದಿಸಬೇಕೆಮ್ದು ಯೋಜಿಸಿದ ಅಜಯ್, ಬಸ್ರುದ್ದೀನ್ ನೊಂದಿಗೆ ಅಖಿಲಾಂಡೇಶ್ವರಿಯನ್ನು ಕೊಲೆ ಮಾಡಿ ಆಕೆಯ ಚಿನ್ನಾಭರಣಗಳನ್ನು ದೋಚುವ ಸಂಚು ರೂಪಿಸಿದ್ದ ಅದರಂತೆಯೇ ದೈಹಿಕ ಸಂಪರ್ಕ ಪಡೆಯುವ ನೆಪದಲ್ಲಿ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದಾರೆ. ಆದರೆ ಅದು ನಕಲಿ ಚಿನ್ನಾಭರಣ ಎಂದು ತನಿಖೆ ವೇಳೆ ತಿಳಿದುಬಂದಿದೆ.
Advertisement