ಭಯೋತ್ಪಾದನೆ ಬಗ್ಗೆ ಚೀನಾ ಇಬ್ಬಗೆ ನೀತಿ : ಶಿವಸೇನೆ
ಮುಂಬೈ: ಭಯೋತ್ಪಾದಕ ಲಖ್ವಿ ಯನ್ನು ಬಿಡುಗಡೆ ಮಾಡಿದ ಪಾಕಿಸ್ತಾನ ವಿರುದ್ಧ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆಯ ನಿರ್ಣಯಕ್ಕೆ ಚೀನಾ ತಡೆಯೊಡ್ಡಿರುವುದಕ್ಕೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಆಕ್ರೋಶಗೊಂಡಿದೆ. ಭಯೋತ್ಪಾದನೆ ವಿಷಯದಲ್ಲಿ ಚೀನ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.
ನಿರ್ಣಯಗಳಿಗೆ ಅನುಮತಿ ನೀಡುವ ವಿಶ್ವಸಂಸ್ಥೆಯ ಸಮಿತಿ, 5 ಖಾಯಂ ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು 10 ಶಾಶ್ವತವಲ್ಲದ ರಾಷ್ಟ್ರಗಳನ್ನು ಹೊಂದಿದೆ. 2008 ರ ಮುಂಬೈ ದಾಳಿಯ ರುವಾರಿ ಉಗ್ರ ಲಖ್ವಿಯನ್ನು ಬಿಡುಗಡೆ ಮಾಡಿದ ಪಾಕಿಸ್ತಾನ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡಿಸಿತ್ತು. ಶಾಶ್ವತ ಸದಸ್ಯತ್ವ ಪಡೆದಿರುವ 5 ರಾಷ್ಟ್ರಗಳ ಪೈಕಿ ಯುಎಸ್, ಬ್ರಿಟನ್, ರಷ್ಯಾ, ಫ್ರಾನ್ಸ್ ಹಾಗೂ ಜರ್ಮನಿ ಭಾರತದ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದವು. ಆದರೆ ಚೀನಾ ಮಾತ್ರ ಭಾರತದ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದೆ.
ಚೀನಾ ಕ್ರಮವನ್ನು ಕಟುವಾಗಿ ಟೀಕಿಸಿರುವ ಶಿವಸೇನೆ, ಒಂದೆಡೆ ಚೀನಾ ತನ್ನ ಒಡಲಲ್ಲಿ ಬೆಳೆಯುತ್ತಿರುವ ಭಯೋತ್ಪಾದನೆಯನ್ನು ಕಠಿಣವಾಗಿ ನಾಶ ಮಾಡುತ್ತಿದೆ, ಮತ್ತೊಂದೆಡೆ ಭಾರತದಲ್ಲಿ ಭಯೋತ್ಪಾದನೆ ಮಾಡಿದವರನ್ನು ಬೆಂಬಲಿಸುತ್ತದೆ, ಇದರಿಂದ ಚೀನಾ ಇಬ್ಬಗೆಯ ನೀತಿ ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಶಿವಸೇನೆ ಹೇಳಿದೆ.
ತನ್ನ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಸಿದ್ಧತೆ ನಡೆಸುತ್ತಿದ್ದ 13 ಮುಸ್ಲಿಮರನ್ನು ಚೀನಾ ಇತ್ತೀಚೆಗಷ್ಟೇ ಗಲ್ಲಿಗೇರಿಸಿದೆ. ಅಷ್ಟೇ ಅಲ್ಲದೇ ಈ ಹಿಂದೆಯೂ ತನ್ನ ದೇಶಕ್ಕೆ ಮುಳುವಾಗಿದ್ದ ಹಲವು ಮುಸ್ಲಿಮರನ್ನು ಚೀನಾ ನಿರ್ದಯವಾಗಿ ಹತ್ಯೆ ಮಾಡಿದೆ. ತನ್ನ ದೇಶದಲ್ಲಿರುವ ಭಯೋತ್ಪಾದಕರನ್ನು ನಾಶ ಮಾಡಿ ಭಾರತದಲ್ಲಿ ಭಯೋತ್ಪಾದನೆ ನಡೆಸುತ್ತಿರುವವರನ್ನು ಬೆಂಬಲಿಸುವುದು ಚೀನಾ ನಿಲುವಾಗಿದೆ ಎಂದು ಶಿವಸೇನೆ ಆರೋಪಿಸಿದೆ.
ಚೀನಾ ಪಾಕಿಸ್ತಾನಕ್ಕೆ ಆಟಂ ಬಾಂಬ್, ಕ್ಷಿಪಣಿ ಹಾಗೂ ನ್ಯೂಕ್ಲಿಯರ್ ರಿಯಾಕ್ಟರ್ ಗಳನ್ನು ಸರಬರಾಜು ಮಾಡುತ್ತಿದೆ. ಸೇನೆಯನ್ನು ಹೊರತುಪಡಿಸಿ ಪಾಕಿಸ್ತಾನದ ಬಳಿ ಇರುವ ಎಲ್ಲಾ ಯುದ್ಧ ಸಾಮಗ್ರಿಗಳು ಚೀನಾದ್ದೇ, ಚೀನಾ ಎಂದಿಗೂ ಭಾರತದ ಸ್ನೇಹಿತನಾಗಲು ಸಾಧ್ಯವಿಲ್ಲ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ