ಮುಂಬೈನಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಹೊತ್ತ ಇಂಡಿಗೋ ವಿಮಾನ ಛತ್ತೀಸ್ ಗಡ್ ರಾಯ್ ಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾಗುವ ಸಾಧ್ಯತೆ ಇದ್ದು, ಕೂದಲೆಳೆಯ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದೆ.
ಡೆಲ್ಲಿ ಡೇರ್ ಡೆವಿಲ್ಸ್ ತಂಡ ಇದ್ದ ಇಂಡಿಗೋ ವಿಮಾನ ರನ್ ವೇಯಲ್ಲಿ ಇಳಿಯುವ ಸಂದರ್ಭದಲ್ಲಿ ಕೊಲ್ಕತ್ತಾ-ರಾಯ್ಪುರ್ ವಿಮಾನ ರನ್ವೇನಲ್ಲಿ ನಿಂತಿತ್ತು. ಇದನ್ನು ಗಮನಿಸದ ಇಂಡಿಗೋ ವಿಮಾನದ ಪೈಲೆಟ್ ವಿಮಾನ ರನ್ ವೇಯಲ್ಲಿ ಇಳಿಸಲು ಮುಂದಾಗಿದ್ದು ತಕ್ಷಣ ಇದನ್ನು ಗಮನಿಸಿದ ಹಿರಿಯ ಪೈಲೆಟ್ಗಳು ವಿಮಾನವನ್ನು ಸ್ವಲ್ಪ ದೂರದಲ್ಲಿ ಸುರಕ್ಷಿತವಾಗಿ ರನ್ವೇಗೆ ಇಳಿಸಿ ಆಗಲಿರುವ ಭಾರೀ ದುರಂತವನ್ನು ತಪ್ಪಿಸಿದ್ದಾರೆ.
ಮೇ 09 ಮತ್ತು 12ರಂದು ರಾಯ್ಪುರ್ನ ಶಾಹೀದ್ ವೀರನಾರಾಯಣ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ತಮ್ಮ ಮುಂದಿನ ಐಪಿಎಲ್ ಪಂದ್ಯಕ್ಕಾಗಿ ಆಗಮಿಸಿದ್ದರು ಎನ್ನಲಾಗಿದೆ. ಹಿರಿಯ ಪೈಲೆಟ್ಗಳ ಕರ್ತವ್ಯ ಪ್ರಜ್ಞೆಯಿಂದ ಈ ವಿಮಾನ ದುರಂತ ತಪ್ಪಿದ್ದು, ಡೇರ್ ಡೆವಿಲ್ಸ್ ತಂಡದ ಸದಸ್ಯರು ಬಚಾವಾಗಿದ್ದಾರೆ.
Advertisement