ನಿಯಮ ಉಲ್ಲಂಘನೆ: ಕೇಂದ್ರ ಸಚಿವರನ್ನು ತಡೆದ ಸಿಐಎಸ್ಎಫ್ ಮಹಿಳಾ ಅಧಿಕಾರಿ
ಪಾಟ್ನಾ: ಪಾಟ್ನಾ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಮ್ ಕೃಪಾಲ್ ಯಾದವ್ ಅವರು ನಿರ್ಗಮನ ಬಾಗಿಲು ಮೂಲಕ ಒಳಗೆ ಪ್ರವೇಶಿಸಲು ಯತ್ನಿಸಿದ್ದನ್ನು ಅಲ್ಲಿನ ಸಿಐಎಸ್ಎಫ್ ಮಹಿಳಾ ಅಧಿಕಾರಿ ತಡೆದಿದ್ದಾರೆ. ನಿರ್ಗಮನ ಬಾಗಿಲು ಮೂಲಕ ಒಳಗೆ ನುಗ್ಗಲು ಯತ್ನಿಸಿದ ಕೇಂದ್ರ ಸಚಿವರನ್ನು ತಡೆದ ಮಹಿಳಾ ಅಧಿಕಾರಿ, ಪ್ರವೇಶ ದ್ವಾರದ ಮೂಲಕವೇ ಒಳಗೆ ಬನ್ನಿ ಎಂದು ಹೇಳಿದ್ದು ಮಾತ್ರವಲ್ಲದೆ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಪಾಟಲೀಪುತ್ರದ ಲೋಕಸಭಾ ಸದಸ್ಯ, ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ರಾಜ್ಯಸಚಿವರಾಗಿರುವ ಯಾದವ್, ಜಯಪ್ರಕಾಶ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಎಕ್ಸಿಟ್ ಗೇಟ್ (ನಿರ್ಗಮನ ದ್ವಾರ) ಮೂಲಕ ಪ್ರವೇಶಿಸಲು ಯತ್ನಿಸಿದ್ದಾರೆ. ಆಗ ಅವರನ್ನು ಮಹಿಳಾ ಅಧಿಕಾರಿ ತಡೆ ಹಿಡಿದಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಮಾಧ್ಯಮದವರು ಸೆರೆ ಹಿಡಿದಿದ್ದರು.
ಆಮೇಲೆ ಮಾಧ್ಯಮದವರೊಂದಿಗೆ ಮಾತನಾಡಿದ ಯಾದವ್ ತಪ್ಪು ನನ್ನದೇ ಎಂದು ಒಪ್ಪಿದ್ದಾರೆ.
ನಾನು ತುಂಬಾ ಅವಸರದಲ್ಲಿದ್ದೆ. ಅದಕ್ಕೆ ಎಕ್ಸಿಟ್ ಗೇಟ್ ಮೂಲಕ ಒಳಗೆ ಹೋಗಲು ಯತ್ನಿಸಿದೆ. ಕೂಡಲೇ ಮಹಿಳಾ ಅಧಿಕಾರಿ ನನಗೆ ಇನ್ನೊಂದು ಗೇಟ್ ಮೂಲಕ ಪ್ರವೇಶಿಸುವಂತೆ ಹೇಳಿದರು. ನಾನು ಅವರ ಆದೇಶವನ್ನು ಪಾಲಿಸಿದ್ದೇನೆ. ನನಗೆ ಅವರೊಂದಿಗೆ ವಾಗ್ವಾದ ಮಾಡುವಂತದ್ದೇನೂ ಇಲ್ಲ. ಅಧಿಕಾರಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ಯಾದವ್ ಹೇಳಿದ್ದಾರೆ.