ನವದೆಹಲಿ: ಭಾರತ-ನೇಪಾಳ ಗಡಿಯಲ್ಲಿ ಭಾರತೀಯನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಗ್ಗೆ ಭಾರತ ಸರ್ಕಾರ ತೀವ್ರ ಆತಂಕ ವ್ಯಕ್ತಪಡಿಸಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರಧಾನಿ ಕೆಪಿ ಓಲಿ ಅವರೊಂದಿಗೆ ಮಾತನಾಡಿದ್ದಾರೆ.
ಗಡಿ ಭಾಗದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದ ಬಗ್ಗೆ ನೇಪಾಳ ಸರ್ಕಾರ ಪರಿಣಾಮಕಾರಿಯಾದ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಹೇಳಿಕೆ ನೀಡಿದ್ದಾರೆ. ನೇಪಾಳ ಗಡಿಯಲ್ಲಿ ಭಾರತೀಯನ ಹತ್ಯೆಯಾಗಿರುವ ಘಟನೆ ನಡೆದ ಬಳಿಕ ಗಡಿ ಪ್ರದೇಶದಲ್ಲಿ ಸಂಚರಿಸುವ ಸರಕು ರವಾನೆ ಮಾಡುವವರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಭಾರತ-ನೇಪಾಳ ಗಡಿಯಲ್ಲಿ ಮದೇಶಿ ಸಮುದಾಯದ ಜನ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಓರ್ವ ಭಾರತೀಯ ಸಾವನ್ನಪ್ಪಿದ್ದ. ನೇಪಾಳ ಹೊಸ ಸಂವಿಧಾನವನ್ನು ವಿರೋಧಿಸಿದ್ದ ಮದೇಶಿ ಸಮುದಾಯದ ಜನರು ಭಾರತೀಯ ಮೂಲದ ಜನರ ಹಿತಕಾಯುವುದಾಗಿ ಹೇಳಿ ಭಾರತ-ನೇಪಾಳ ಗಡಿಯ ಪ್ರಮುಖ ವ್ಯಾಪಾರ ವಹಿವಾಟಿನ ಸರಕು ಸಾಗಣೆ ಮಾರ್ಗದ ಮೇಚಿ ಸೇತುವೆ ಬಳಿ ಸರಕು ಸಾಗಣೆ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದಾಗಿ ನೇಪಾಳದಲ್ಲಿ ನಡೆಯುವ ಪ್ರಮುಖ ವ್ಯಾಪಾರ ಚಟುವಟಿಕೆಗಳಿಗೆ ತೊಂದರೆಯಾಗಿತ್ತು.ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
Advertisement