ಚೆನ್ನೈ: ಭೀಕರ ಮಳೆಯಿಂದ ತತ್ತರಿಸಿ ಹೋಗುತ್ತಿರುವ ತಮಿಳುನಾಡು ರಾಜ್ಯದ ಸ್ಥಿತಿಗತಿಯನ್ನು ಕೇಂದ್ರ ಸರ್ಕಾರಕ್ಕೆ ವಿವರಿಸಿರುವ ಮುಖ್ಯಮಂತ್ರಿ ಜೆ.ಜಯಲಲಿತಾ, ನೆರವು ಒದಗಿಸುವಂತೆ ಕೋರಿ ಕೇಂದ್ರಕ್ಕೆ ಮುಂದಿನ ವಾರ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ರಾಜ್ಯದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಅಲ್ಲದೆ ಕೇಂದ್ರದ ತಂಡವೊಂದು ರಾಜ್ಯಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಾಮರ್ಶಿಸುವಂತೆ ಕೋರಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಮತ್ತು ಇತರ ಮೂಲಗಳಿಂದ ಹಣ ಬಿಡುಗಡೆ ಮಾಡುವಂತೆ ನವೆಂಬರ್ 23ರಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಯವರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ವಿವರವಾದ ಮನವಿ ಕಳುಹಿಸಿಕೊಡಿ. ನಂತರ ಪರಿಸ್ಥಿತಿ ಅಧ್ಯಯನ ತಂಡವನ್ನು ಕಳುಹಿಸಿಕೊಡುತ್ತೇವೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
ಪ್ರಸ್ತುತ ಚೀನಾದಲ್ಲಿರುವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಜಯಲಲಿತಾ ಅವರ ಜೊತೆ ಮಾತನಾಡಿ ಎಲ್ಲಾ ನೆರವು ಒದಗಿಸುವ ಭರವಸೆ ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ತಮಿಳುನಾಡಿನ ಚೆನ್ನೈ, ತಿರುವಲ್ಲೂರು, ಕಾಂಚೀಪುರಂ ಮತ್ತು ಕದ್ದಲೂರು ಜಿಲ್ಲೆಗಳು ಮಳೆ ಮತ್ತು ಪ್ರವಾಹಗಳಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾಗಿವೆ.
ಚಂಡಮಾರುತದಿಂದ ಹಾನಿಗೀಡಾದ ಪ್ರಮಾಣವನ್ನು ಅಂದಾಜು ಮಾಡಲಾಗುತ್ತಿದೆ.
ತಮಿಳುನಾಡು ಸರ್ಕಾರ, ಜನರ ರಕ್ಷಣೆಗಾಗಿ ಹಲವು ತುರ್ತು ಕ್ರಮ ತೆಗೆದುಕೊಂಡಿದೆ. ಕೇಂದ್ರದ ವಿಪತ್ತು ನಿರ್ವಹಣಾ ಪಡೆ, ಸೇನೆ, ವಾಯುಪಡೆ, ನೌಕಾ ಪಡೆ ಮತ್ತು ತೀರಪಡೆಗಳ ನೆರವಿನಿಂದ ಜನರಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಚರಣೆ ನಡೆಸಲಾಗುತ್ತಿದೆ.
Advertisement