
ಹೈದರಾಬಾದ್: ಇನ್ನು ಐದೇ ವರ್ಷಗಳಲ್ಲಿ ಭಾರತ ಕ್ಷಿಪಣಿ ಕ್ಷೇತ್ರದಲ್ಲಿ ಶೇ.100ರಷ್ಟು ಸ್ವಾವಲಂಬಿಯಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ರಕ್ಷಣಾ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮನೋಹರ್ ಪರಿಕ್ಕರ್ ಅವರು, ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಈ ಎಲ್ಲ ಸಾಧನೆಗೂ ಮಾಜಿ ರಾಷ್ಟ್ರಪತಿ ಮತ್ತು ವಿಜ್ಞಾನಿ ದಿ.ಅಬ್ದುಲ್ ಕಲಾಂ ಅವರಿಗೆ ಸಲ್ಲಬೇಕು. ಭಾರತದ ಕ್ಷಿಪಣಿ ತಂತ್ರಜ್ಞಾನ ಇಂದು ವಿಶ್ವಮಟ್ಟಕ್ಕೆ ಬೆಳೆದಿದೆ ಎಂದರೆ ಅದಕ್ಕೆ ಅವರೇ ಕಾರಣ. ಅವರು ಅತ್ಯುತ್ತಮ ದೂರದೃಷ್ಟಿ ಹೊಂದಿದ್ದರು. ಅವರ ಜೀವನ ಮತ್ತು ಅವರ ಪುಸ್ತಕಗಳು ವಿಜ್ಞಾನವನ್ನು ವೃತ್ತಿಪರವಾಗಿ ತೆಗೆದುಕೊಳ್ಳುವಂತೆ ಯುವ ಜನಾಂಗವನ್ನು ಪ್ರೇರೇಪಿಸುವಂತಿವೆ. ಕಲಾಂ ಯಾಂದಿಗೂ ಭಾರತದ ಭವಿಷ್ಯವನ್ನು ನಿರ್ಧರಿಸುವವರು ಯುವ ಜನಾಂಗದವರು ಎಂದು ನಂಬಿದ್ದರು ಎಂದು ಹೇಳಿದರು.
ನಿನ್ನೆಯಷ್ಟೇ ಅಬ್ದುಲ್ ಕಲಾಂ ಅವರ ಜನ್ಮ ದಿನವಾಗಿದ್ದು, ಈ ಹಿನ್ನಲೆಯಲ್ಲಿ ಇಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೈದರಾಬಾದಿನಲ್ಲಿರುವ ಡಿಆರ್ ಡಿಒದ ಪ್ರತಿಷ್ಠಿತ ಕ್ಷಿಪಣಿ ಕಾಂಪ್ಲೆಕ್ಸ್ ಗೆ ಅಬ್ದುಲ್ ಕಲಾಂ ಅವರ ಹೆಸರನ್ನು ಮರು ನಾಮಕರಣ ಮಾಡಿದರು. ಕ್ಷಿಪಣಿ ಕಾಂಪ್ಲೆಕ್ಸ್ ನ ಅಡ್ವಾನ್ಸ್ಡ್ ಸಿಸ್ಟಮ್ಸ್ ಲ್ಯಾಬೊರೇಟರಿ (ASL), ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಲ್ಯಾಬೊರೇಟರಿ (DRDL) ಮತ್ತು ರೀಸರ್ಚ್ ಸೆಂಟರ್ ಇಮಾರತ್ (RCI) ಬ್ಲಾಕ್ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕಲಾಂ ಅವರ ಹೆಸರನ್ನು ಮರು-ನಾಮಕರಣ ಮಾಡಿದರು.
ಈ ವೇಳೆ ಮಾತನಾಡಿದ ಚೆವೆಲ್ಲಾ ಕ್ಷೇತ್ರ ಸಂಸದ ವಿಶ್ವೇಶ್ವರ ರೆಡ್ಡಿ, ಹಿಂದೆ ಬಹುತೇಕ ಕ್ಷಿಪಣಿಗಳ ಬಿಡಿಭಾಗಗಳನ್ನು ವಿದೇಶಗಳಿಂದ ಭಾರತಕ್ಕೆ ತರಿಸಿಕೊಳ್ಳಲಾಗುತ್ತಿತ್ತು. ಇದೀಗ ಶೇ.80 ಬಿಡಿಭಾಗಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದೆ. ಇನ್ನೈದು ವರ್ಷಗಳಲ್ಲಿ ಶೇ.100 ರಷ್ಟು ಬಿಡಿಭಾಗಗಳನ್ನು ಭಾರತದಲ್ಲಿಯೇ ತಯಾರಿಸುವ ಗುರಿಹೊಂದಲಾಗಿದೆ ಎಂದು ಹೇಳಿದರು. ಅಲ್ಲದೆ ತೆಲಂಗಾಣ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ ಅವರು, ತೆಲಂಗಾಣ ಭಾಗದಲ್ಲಿ ನಡೆಯುವ ರಕ್ಷಣಾ ಇಲಾಖೆಯ ಯಾವುದೇ ಕಾರ್ಯಕ್ರಮಗಳಿಗೆ ಸರ್ಕಾರದ ಸಂಪೂರ್ಣ ಸಹಕಾರವಿರುತ್ತದೆ ಎಂದು ಆಶ್ವಾಸನೆ ನೀಡಿದರು.
ಬೆಂಗಳೂರು ಏರೋ ಇಂಡಿಯಾದಲ್ಲಿ ಬದಲಾವಣೆ ಇಲ್ಲ
ಬೆಂಗಳೂರು ಏರೋ ಇಂಡಿಯಾ ಪ್ರದರ್ಶನವನ್ನು ಕರ್ನಾಟಕದ ಇತರೆ ಪ್ರದೇಶಕ್ಕೆ ರವಾನಿಸುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿ ಕುರಿತಂತೆ ಮಾತನಾಡಿದ ಪರಿಕ್ಕರ್ ಅವರು, ಬೆಂಗಳೂರು ಏರೋ ಇಂಡಿಯಾ ಪ್ರದರ್ಶನದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಟ್ರಾಫಿಕ್ ತೊಂದರೆಯಿಂದಾಗಿ ಪ್ರದರ್ಶನವನ್ನು ಬೇರೆಡೆ ಸ್ಥಳಾಂತರಿಸುವಂತೆ ಕರ್ನಾಟಕ ಸರ್ಕಾರ ಕೇಳಿತ್ತು. ಆದರೆ ನಾವು ಅದನ್ನು ಪುರಸ್ಕರಿಸಿಲ್ಲ ಎಂದು ಪರಿಕ್ಕರ್ ಹೇಳಿದರು.
Advertisement