ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳ ಸುಧಾರಣೆಗಳಿಗಾಗಿ ಭಾರತ ಮತ್ತು ಆಫ್ರಿಕಾ ಒಮ್ಮತ ತೋರಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ಆರಂಭಗೊಂಡಿರುವ ಭಾರತ-ಆಫ್ರಿಕಾ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಆಫ್ರಿಕಾಕ್ಕೆ ಸ್ಥಾನ ನೀಡದಿದ್ದರೆ ಅಂತಾರಾಷ್ಟ್ರೀಯ ವೇದಿಕೆಗಳು ವಿಶ್ವದ ಪ್ರಾತಿನಿಧ್ಯ ವಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ವಿಶ್ವದಲ್ಲಿ ರಾಜಕೀಯ, ಆರ್ಥಿಕ, ತಾಂತ್ರಿಕ ಮತ್ತು ಭದ್ರತಾ ವಿಷಯಗಳು ಬಹಳ ಬೇಗನೆ ಬದಲಾಗುತ್ತಿದೆ. ಆದರೂ ನಾವು ಬಹಳ ಹಿಂದುಳಿದಿದ್ದೇವೆ ಎಂಬ ಭಾವನೆ ಕಾಡುತ್ತದೆ ಎಂದರು.
21ನೇ ಶತಮಾನ ಮುಕ್ತ ದೇಶಗಳನ್ನು ಮತ್ತು ಜಾಗೃತ ಹುರುಪನ್ನು ಹೊಂದಿದ ಜನರನ್ನು ಒಳಗೊಂಡ ವಿಶ್ವವಾಗಿದೆ. ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಆಫ್ರಿಕಾಕ್ಕೆ ಸ್ಥಾನ ನೀಡದಿದ್ದರೆ ಅದು ವಿಶ್ವದ ರಾಷ್ಟ್ರಗಳ ಪ್ರಾತಿನಿಧ್ಯ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಅವರು ಆಫ್ರಿಕಾಕ್ಕೆ ಮುಂದಿನ 5 ವರ್ಷಗಳಲ್ಲಿ ಸುಮಾರು 65 ಸಾವಿರ ಕೋಟಿ ರೂಪಾಯಿ ನೆರವು ಮತ್ತು ಸುಮಾರು 3 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ಪ್ರಕಟಿಸಿದೆ. ಈ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹವಾಮಾನ ಬದಲಾವಣೆ, ಭಯೋತ್ಪಾದನೆ ನಿಗ್ರಹ ಮತ್ತು ವಿಶ್ವಸಂಸ್ಥೆ ಸುಧಾರಣೆಗೆ ಭಾರತ, ಆಫ್ರಿಕಾ ದೇಶಗಳ ನೆರವನ್ನು ಬಯಸುತ್ತದೆ ಎಂದು ಹೇಳಿದರು.
Advertisement