ಪಾಟ್ನಾ: ಬಿಹಾರ ವಿಧಾನ ಸಭಾ ಚುನಾವಣಾ ಹಿನ್ನಲೆಯಲ್ಲಿ ಆರ್ ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಪಕ್ಷಗಳು ಮಾಡಿಕೊಂಡಿರುವ ಮಹಾಮೈತ್ರಿ ಒಕ್ಕೂಟದ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು, "ಮೂರು ಕಾಲಿನ ಓಟ"ವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಿಹಾರ ಚುನಾವಣೆಯ ಹಿನ್ನಲೆಯಲ್ಲಿ ರಾಜಧಾನಿ ಪಾಟ್ನಾದಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ‘ವಿಷನ್ ಡಾಕ್ಯುಮೆಂಟ್’ ಬಿಡುಗಡೆ ಮಾಡಿ ಮಾತನಾಡಿದ ಅರುಣ್ ಜೇಟ್ಲಿ, ಮಹಾಮೈತ್ರಿಕೂಟ ಗೆಲ್ಲಲು ಸಾಧ್ಯವೇ ಇಲ್ಲ. ಒಂದು ವೇಳೆ ಗೆದ್ದರೆ ರಾಜ್ಯದಲ್ಲಿ ಅರಾಜಕತೆ ಉಂಟಾಗುತ್ತದೆ. ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದರೆ ‘ಅರಾಜಕತೆ’ ಮತ್ತು ‘ಕಾಡಿನ ರಾಜ್ಯ’ ಬರುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಅಲ್ಲದೆ ಮಹಾಮೈತ್ರಿಯು ವಿರೋಧಾಭಾಸಗಳ ಮೈತ್ರಿಕೂಟ ಎಂದು ದೂರಿದ ಅವರು, ಅದರಲ್ಲಿ ಸೇರಿರುವವರೆಲ್ಲರೂ ಸಮಯಸಾಧಕರು. ರಾಜಕೀಯ ಸ್ಥಿರತೆ ಅವರ ಮೌಲ್ಯವಲ್ಲ. ಅವರು ಗೆದ್ದಲ್ಲಿ ಬಿಹಾರವನ್ನು ಅರಾಜಕತೆಯತ್ತ ತಳ್ಳುವರೇ ಹೊರತು ಬೇರಾವ ಫಲಿತಾಂಶ ಅಸಾಧ್ಯ ಎಂದು ಜೇಟ್ಲಿ ಹೇಳಿದರು.
"ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟವು (ಎನ್ಡಿಎ) ರಾಜ್ಯದ ಮೇಲಿರುವ ಹಿಂದುಳಿದ ರಾಜ್ಯ ಎಂಬ ಹಣೆಪಟ್ಟಿಯನ್ನು ಅಳಿಸಿ, ರಾಜ್ಯವನ್ನು ಅಭಿವೃದ್ಧಿಯ ಮಾರ್ಗದಲ್ಲಿ ಮುನ್ನಡೆಸುವುದಾಗಿ ಜೇಟ್ಲಿ ಭರವಸೆ ನೀಡಿದರು.
ಬಿಜೆಪಿ ಪ್ರಣಾಳಿಕೆಯಲ್ಲಿ ಉಚಿತ ಲ್ಯಾಪ್ ಟಾಪ್, ದ್ವಿಚಕ್ರವಾಹನ, ಕಲರ್ ಟಿ.ವಿ..!
ಇನ್ನು ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವ ತನ್ನ ಚುನಾವಣಾ ಪ್ರಣಾಳಿಕ "ವಿಷನ್ ಡಾಕ್ಯುಮೆಂಟ್" ನಲ್ಲಿ ಹಲವು ಪ್ರಮುಖ ವಿಚಾರಗಳನ್ನು ಬಿಂಬಿಸಲಾಗಿದ್ದು, ಬಿಹಾರ ಹಿಂದುಳಿದಿರುವಿಕೆಯನ್ನು ನಿವಾರಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟ್ಯಾಪ್, ಬಾಲಕಿಯರಿಗೆ ದ್ವಿಚಕ್ರವಾಹನಗಳು, ದಲಿತರು ಮತ್ತು ಮಹಾದಲಿತರಿಗೆ ಕಲರ್ ಟಿವಿಗಳನ್ನು ಒದಗಿಸಲಾಗುವುದು ಎಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
Advertisement