ಫ್ಲೈ ಓವರ್ ದುರಂತ, ಶಾರದಾ ಹಗರಣವಿಡಿದು ಮಮತಾ ವಿರುದ್ಧ ರಾಹುಲ್ ವಾಗ್ದಾಳಿ

ಕೋಲ್ಕತಾ ಫ್ಲೈ ಓವರ್ ದುರಂತ ಹಾಗೂ ಶಾರದಾ ಹಗರಣವಿಡಿದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ...
ರ್ಯಾಲಿಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ರ್ಯಾಲಿಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

ಕುಲ್ಟಿ(ಪಶ್ಚಿಮ ಬಂಗಾಳ): ಕೋಲ್ಕತಾ ಫ್ಲೈ ಓವರ್ ದುರಂತ ಹಾಗೂ ಶಾರದಾ ಹಗರಣವಿಡಿದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತಂತೆ ರ್ಯಾಲಿಯೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಮಮತಾ ಬ್ಯಾನರ್ಜಿಯವರು ಪ್ರತೀ ಹೆಜ್ಜೆಯಲ್ಲೂ ವಿಫಲವಾಗಿದ್ದಾರೆ. ಅಲ್ಲದೆ, ಚುನಾವಣೆಗೂ ಮುನ್ನ ನೀಡಿದ್ದ ಯಾವುದೇ ಭರವಸೆಯನ್ನೂ ಈಡೇರಿಸಿಲ್ಲ. ಎಡಪಕ್ಷಗಳು ಹಾಗೂ ಕಾಂಗ್ರೆಸ್ ಕೈ ಜೋಡಿಸಿದ್ದು, ಮಮತಾ ಬ್ಯಾನರ್ಜಿಯವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಪಶ್ಚಿಮ ಬಂಗಾಳದ ಜನತೆಗೆ ತಿಳಿದಿದೆ ಹೇಳಿದ್ದಾರೆ.

ಕೋಲ್ಕತಾದಲ್ಲಿ ಫ್ಲೈ ಓವರ್ ಕುಸಿದು ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಘಟನೆ ಕುರಿತಂತೆ ಮಮತಾ ಅವರು ಮಾತ್ರ ಪ್ರಕರಣದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಸೇತುವೆ ನಿರ್ಮಾಣ ಕಾರ್ಯ 5 ವರ್ಷಗಳ ಕಾಲ ಸ್ಥಗಿತವಾಗಿದ್ದು ಯಾವ ಕಾರಣಕ್ಕೆ? ಪಶ್ಚಿಮ ಬಂಗಾಳ ಜನತೆ ನಿಮಗೆ ಅಧಿಕಾರ ನೀಡಿರುವುದು ಜನರ ಸುಧಾರಣೆಗಾಗಿ. ಇಂದು ಜೀವ ಕಳೆದುಕೊಂಡವರಾರು ಟಿಎಂಸಿ ಪಕ್ಷದ ಕಾರ್ಯಕರ್ತರಲ್ಲ.

ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ ನಮಗೆ ಬೇಡ. ಒಬ್ಬ ವ್ಯಕ್ತಿ ರಾಜ್ಯದ ಆಡಳಿತ ನಡೆಸುವುದು ನಮಗೆ ಬೇಡ. ಹೀಗಾಗಿಯೇ ನಾವು ಟಿಎಂಸಿ ವಿರುದ್ಧ ಹೋರಾಡುವ ಸಲುವಾಗಿ ಎಡ ಪಕ್ಷಗಳೊಂದಿಗೆ ಕೈ ಜೋಡಿಸಿದ್ದೇವೆ. ಮಮತಾ ಅವರು ಯಾವಾಗಲೂ ತಾವು ಭ್ರಷ್ಟಾಚಾರ ವಿರುದ್ಧವಿದ್ದೇನೆಂದು ಹೇಳುತ್ತಾರೆ. ಆದರೆ ಶಾರದಾ ಹಗರಣ ಪ್ರಕರಣದಲ್ಲಿ ಏನಾಯಿತು. ಈ ಬಗ್ಗೆ ಅವರು ಒಂದು ಪದವನ್ನೂ ಮಾತನಾಡುವುದಿಲ್ಲ. ರಾಜ್ಯದ ಯುವ ಜನತೆಗೆ ಉದ್ಯೋಗ ಸೃಷ್ಟಿಸಿದ್ದೇನೆಂದು ಮಮತಾ ಹೇಳುತ್ತಿರುತ್ತಾರೆ. ಆದರೆ, ಅದರಲ್ಲಿ ಅವರು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ವೇದಿಕೆಯ ಮೇಲೆ ಚುನಾವಣಾ ಪ್ರಚಾರ ಮಾಡಿದ ಅವರು, ಒಂದು ಬಾರಿ ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ, ನಾವು ಯುವ ಜನತೆಗೆ ಉದ್ಯೋಗ ಸೃಷ್ಟಿಸುತ್ತೇವೆ. ಖಂಡಿತವಾಗಿಯೂ ನಾವು ಸರ್ಕಾರವನ್ನು ರೂಪಿಸುತ್ತೇವೆ. ರಾಜ್ಯದಲ್ಲಿ ಅಭಿವೃದ್ಧಿಯನ್ನು ತರುತ್ತೇವೆ. ಇಲ್ಲಿರುವ ಬುಡಕಟ್ಟು ಹಾಗೂ ಆದಿವಾಸಿಗಳಿಗಾಗಿ ಕೆಲಸ ಮಾಡುತ್ತೇವೆ. ಭ್ರಷ್ಟಾಚಾರ ವಿರುದ್ಧ ಹೋರಾಡುತ್ತೇವೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com