ಹೈದರಾಬಾದ್: ಸೆಲ್ಫಿ ಕ್ರೇಜ್ ಹೆಚ್ಚುತ್ತಿರುವಂತೆಯೇ ಸೆಲ್ಫಿಗಳಿಂದಾಗಿ ಸಂಭವಿಸುವ ಪ್ರಾಣಹಾನಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ಈ ಬಾರಿ ಸೆಲ್ಫಿ ಕ್ರೇಜ್ ಗೆ ಜೀವ ತೆತ್ತಿರುವುದು 10 ನೇ ತರಗತಿಯ ಬಾಲಕ. 10 ನೇ ತರಗತಿಯ ಪರೀಕ್ಷೆ ಮುಕ್ತಾಯಗೊಳಿಸಿ ರಜೆಯ ಮೂಡ್ ನಲ್ಲಿದ್ದ ವಿದ್ಯಾರ್ಥಿ ಮನ್ ಜೀತ್ ಚೌಧರಿ ಕುಟುಂಬ ಸದಸ್ಯರೊಂದಿಗೆ ಹೈದರಾಬಾದ್ ನ ನೆಹರು ಜೂವಾಲಾಜಿಕಲ್ ಪಾರ್ಕ್ ಗೆ ತೆರಳಿದ್ದಾನೆ. ಈ ವೇಳೆ ಅಪಾಯಕಾರಿ ಪ್ರದೇಶದಲ್ಲಿ ನಿಂತು ಸೆಲ್ಫಿ ತೆಗೆಯುವ ಭರದಲ್ಲಿ ಜೀವವನ್ನೇ ಕಳೆದುಕೊಂಡಿದ್ದಾನೆ.
ಜೂವಾಲಾಜಿಕಲ್ ಪಾರ್ಕ್ ನಲ್ಲಿ ನೋ ಎಂಟ್ರಿ ಜೋನ್ ನಲ್ಲಿರುವ ಕೃತಕ ಜಲಪಾತದ ಬಳಿ ಇರುವ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆಯಬೇಕಾದರೆ ಮನ್ ಜೀತ್ ಚೌಧರಿ ಕಾಲು ಜಾರಿ ಕೃತಕ ಜಲಪಾತಕ್ಕೆ ಬಿದ್ದಿದ್ದಾನೆ. ಮೃತ ವಿದ್ಯಾರ್ಥಿಯ ಪೋಷಕರು ವಿದ್ಯುದಾಘಾತದಿಂದಾಗಿ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಕೃತಕ ಜಲಪಾತಕ್ಕೆ ಬೀಳುತ್ತಿದ್ದಂತೆಯೇ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ನೋ ಎಂಟ್ರಿ ಬೋರ್ಡ್ ನ ಹೊರತಾಗಿಯೂ ಮನ್ ಜೀತ್ ಚೌಧರಿ ಸೆಲ್ಫಿ ತೆಗೆಯಲು ಹೋಗಿದ್ದೇ ಈ ದುರ್ಘಟನೆಗೆ ಕಾರಣ ಎಂದು ಜೂವಾಲಾಜಿಕಲ್ ಪಾರ್ಕ್ ನ ಸಿಬ್ಬಂದಿಗಳು ಹೇಳಿದ್ದು ವಿದ್ಯುದಾಘಾತದಿಂದಾಗಿ ಸಾವು ಸಂಭವಿಸಿದೆ ಎಂಬುದನ್ನು ನಿರಾಕರಿಸಿದ್ದಾರೆ.
Advertisement