ಶ್ರೀನಗರ: ಶ್ರೀನಗರ ಎನ್ ಐಟಿಯಲ್ಲಿನ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಟೀಕೆಗಳಿಗೆ ಕುರಿತಂತೆ ಪ್ರತಿಕ್ರಿಯಿಸಿರುವ ಕಾಶ್ಮೀರ ಪೊಲೀಸರು ತಮಗೆ ಯಾರಿಂದಲೂ ರಾಷ್ಟ್ರೀಯತೆಯ ಪ್ರಮಾಣಪತ್ರ ಬೇಕಿಲ್ಲ ಎಂದು ಕಿಡಿಕಾರಿದ್ದಾರೆ.
ಶ್ರೀನಗರ ಎನ್ ಐಟಿಯಲ್ಲಿ ನಡೆದ ಘರ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲಬಾರಿಗೆ ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಬಾರಾಮುಲ್ಲಾ ಡಿಎಸ್ ಪಿ ಫಿರೋಜ್ ಯಹ್ಯಾ ಅವರು, ನನ್ನ ಸಾಕಷ್ಟು ಸಹೋದ್ಯೋಗಿಗಳು ನಾವು ಯಾರ ವಿರುದ್ಧ ಹೋರಾಡುತ್ತಿದ್ದೇವೆ ಎಂದು ನನ್ನನ್ನೇ ಪ್ರಶ್ನಿಸಿದ್ದಾರೆ. ನಾನು ಹೇಳುವುದು ಒಂದೇ ಕಾಶ್ಮೀರ ಪೊಲೀಸರ ತ್ಯಾಗ ಬಲಿದಾನವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಭಯೋತ್ಪಾದನೆ ಎಂಬ ಹುಚ್ಚುತನದಿಂದ ರಾಜ್ಯವನ್ನು ರಕ್ಷಿಸಲು ಹಗಲಿರುಳು ಶ್ರಮಿಸಿದ್ದೇವೆ. ಇದಕ್ಕೆ ನಮ್ಮ ಹುತಾತ್ಮ ಪೊಲೀಸರೇ ಸಾಕ್ಷಿ. ನಮ್ಮ ರಾಷ್ಟ್ರೀಯತೆಯನ್ನು ಪ್ರಶ್ನಿಸುವ ಮೂಲಕ ಆ ತ್ಯಾಗ ಮತ್ತು ಬಲಿದಾನಕ್ಕೆ ಅಗೌರವ ನೀಡುವುದು ಬೇಡು ಮತ್ತು ನಮ್ಮ ರಾಷ್ಟ್ರೀಯತೆಗೆ ಯಾರ ಪ್ರಮಾಣಪತ್ರವೂ ನಮಗೆ ಬೇಕಿಲ್ಲ ಎಂದು ಖಾಕವಾಗಿ ಹೇಳಿದ್ದಾರೆ.
ಇನ್ನು ಇಂತಹದೇ ಪ್ರತಿಕ್ರಿಯೆನ್ನು ಕಾಶ್ಮೀರದ ಮತ್ತೋರ್ವ ಪೊಲೀಸ್ ಹಿರಿಯ ಅಧಿಕಾರಿಯಾದ ಮುಬಸ್ಸೀರ್ ಲತಿಫಿ ಅವರ ವ್ಯಕ್ತಪಡಿಸಿದ್ದು, ಕಾಶ್ಮೀರ ಪೊಲೀಸರ ರಾಷ್ಟ್ರೀಯತೆಗೆ ಮತ್ತು ನಿಷ್ಪಕ್ಷಪಾತ ಕರ್ತವ್ಯಕ್ಕೆ ಯಾರ ಪ್ರಮಾಣಪತ್ರವೂ ಬೇಕಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಶ್ರೀನಗರ ಎನ್ ಐಟಿ ಸಂಸ್ಥೆಯಲ್ಲಿ ನಡೆದ ಘರ್ಷಣೆ ವೇಳೆ ಪ್ರತಿಭಟನಾ ನಿರತ ಬಿಜೆಪಿ ನೇತೃತ್ವದ ವಿದ್ಯಾರ್ಥಿ ಮುಂಖಡರ ವಿರುದ್ಧ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ವ್ಯಾಪಕ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿ ಸಂಘಟನೆಗಳು ಪೊಲೀಸರು ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೊರಗಿನ ವಿದ್ಯಾರ್ಥಿಗಳ ವಿರುದ್ಧ ವಿನಾಕಾರಣ ಲಾಠಿಚಾರ್ಜ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರ ಕಾಶ್ಮೀರದ ಮಾಧ್ಯಮಗಳು ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೀಡಾಗಿತ್ತು.
Advertisement