ಸಂತರೊಬ್ಬರ ಸದ್ದಿಲ್ಲದ ಶ್ರಮ; ಮದ್ಯ ಮುಕ್ತವಾಯಿತು ಕಲಬುರ್ಗಿಯ ಗ್ರಾಮ!

ಈ ಗ್ರಾಮದಲ್ಲಿ ಜಾಗೃತಿ ಅಭಿಯಾನಗಳಿಗಿಂತ ಸಂತರೊಬ್ಬರ ಸದ್ದಿಲ್ಲದ ಶ್ರಮ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.
ಸಂತರೊಬ್ಬರ ಸದ್ದಿಲ್ಲದ ಶ್ರಮ; ಮದ್ಯಮುಕ್ತವಾಯಿತು ಕಲಬುರ್ಗಿಯ ಗ್ರಾಮ!
ಸಂತರೊಬ್ಬರ ಸದ್ದಿಲ್ಲದ ಶ್ರಮ; ಮದ್ಯಮುಕ್ತವಾಯಿತು ಕಲಬುರ್ಗಿಯ ಗ್ರಾಮ!

ಕಲ್ಬುರ್ಗಿ: ಮದ್ಯ ನಿಷೇಧ, ಮದ್ಯಮುಕ್ತ ಗ್ರಾಮಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ರೀತಿಯ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವುದು ಸಾಮಾನ್ಯ. ಆದರೆ ಈ ಗ್ರಾಮದಲ್ಲಿ ಜಾಗೃತಿ ಅಭಿಯಾನಗಳಿಗಿಂತ ಸಂತರೊಬ್ಬರ ಸದ್ದಿಲ್ಲದ ಶ್ರಮ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. 
ಕಲ್ಬುರ್ಗಿ ಜಿಲ್ಲೆಯ ವಿರಕ್ತ ಮಠದ ಶಾಂತಲಿಂಗೇಶ್ವರ ಸ್ವಾಮಿಜಿ(70 ) ನಿಂಬಾಳ ಗ್ರಾಮ ಮದ್ಯಮುಕ್ತವಾಗುವುದರ ಹಿಂದಿರುವ ಚೇತನ. ಯುಗಾದಿಯ ದಿನದಂದು ಮಾತ್ರ ಮಾತನಾಡುವ ಶಾಂತಲಿಂಗೇಶ್ವರ ಸ್ವಾಮಿಜಿ, ಉಳಿದ ಎಲ್ಲಾ ದಿನಗಳಲ್ಲೂ ಮೌನಾಚರಣೆ ಮಾಡುತ್ತಾದೆ. ಮೌನವಾಗಿದ್ದುಕೊಂಡೇ ಶಾಂತಲಿಂಗೇಶ್ವರ ಸ್ವಾಮಿ ನಿಂಬಾಳ ಗ್ರಾಮವನ್ನು ಮದ್ಯ ಮುಕ್ತವನ್ನಾಗಿಸಲು ಶ್ರಮಿಸಿದ್ದಾರೆ ಎಂಬುದು ವಿಶೇಷ.
ಕಲ್ಬುರ್ಗಿಯಿಂದ 40 ಕಿ.ಮಿ ದೂರದಲ್ಲಿರುವ ನಿಂಬಾಳ ಗ್ರಾಮದಲ್ಲಿ ಮೂಲಭೂತ ಸೌಕರ್ಯವಿಲ್ಲ. ಆದರೆ  ಮದ್ಯವ್ಯಸನ ಹಾಗೂ ಅದರ ಪರಿಣಾಮವಾದ ಕೌಟುಂಬಿಕ ಸಮಸ್ಯೆಗಳಿಗೆ ಬರ ಇರಲಿಲ್ಲ. ಗ್ರಾಮದಲ್ಲಿ ಕಂಡು ಬಂದ ಮದ್ಯವ್ಯಸನ  ಸ್ಥಿತಿಯಿಂದ ಆತಂಕಕ್ಕೊಳಗಾದಿದ್ದ ಶಾಂತಲಿಂಗೇಶ್ವರ ಸ್ವಾಮಿಗಳು ನಿಂಬಾಳ ಗ್ರಾಮವನ್ನು ಮದ್ಯ ವ್ಯಸನ ಮುಕ್ತವಾಗಿಸುವುದಕ್ಕೆ ಸಂಕಲ್ಪ ಮಾಡಿದ್ದರು. ಸ್ವಾಮಿಜಿಗಳ ಸಂಕಲ್ಪ 2013 ರಲ್ಲೇ ಈಡೇರಿದ್ದು ಈಗ ನಿಂಬಾಳ ಗ್ರಾಮ ಸಂಪೂರ್ಣ ಮದ್ಯವ್ಯಸನ ಮುಕ್ತ ಗ್ರಾಮವಾಗಿದೆ.
ಸನ್ಹೆ ಮೂಲಕವೇ ಗ್ರಾಮಸ್ಥರೊಂದಿಗೆ ಸಂವಹನ ನಡೆಸುವ ಶಾಂತಲಿಂಗೆಶ್ವರ ಸ್ವಾಮಿಗಳು, ಪೇಪರ್ ತುಂಡುಗಳಲ್ಲಿ ಬರೆಯುವ ಮೂಲಕ ಅಥವಾ ಸನ್ಹೆಯ ಮೂಲಕ ಮದ್ಯ ಸೇವನೆಬಿಡುವುದರ ಪ್ರಾಮುಖ್ಯತೆ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಗ್ರಾಮದ ಬಹುತೇಕ ಜನರು ಸ್ವಾಮಿಜಿ ಮಾತಿಗೆ ಓಗೊಟ್ಟು ಮದ್ಯಸೇವನೆ ಬಿಟ್ಟಿದ್ದರು. ಏತನ್ಮಧ್ಯೆ ದಲಿತ ಯುವಕನೋರ್ವ ಮದ್ಯ ಸೇವನೆ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತನಿಗೆ ಥಳಿಸಿ ದಲಿತರು ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಈ ಘಟನೆ ಸ್ವಾಮಿಜಿ ಮನಸ್ಸನ್ನು ಘಾಸಿಗೊಳಿಸಿತ್ತು ಪರಿಣಾಮ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಮದ್ಯಸೇವನೆ ಬಿಟ್ಟು ಸೌಹಾರ್ದ ವಾತಾವರಣದಲ್ಲಿ ಜೀವನ ನಡೆಸುವವರೆಗೂ ತಾವು ಗ್ರಾಮಕ್ಕೆ ಕಾಲಿಡುವುದಿಲ್ಲ ಎಂಬ ಶಪಥ ಮಾಡಿ ಗ್ರಾಮದಿಂದ ಹೊರನಡೆದು ಕಲಬುರ್ಗಿಯಲ್ಲಿ ಸುಮಾರು ಮೂರು ತಿಂಗಳ ಕಾಲ ವಾಸವಿದ್ದರು. ಗ್ರಾಮಸ್ಥರ ಮನಸ್ಥಿತಿ  ಬದಲಾಗಲು ಕಾರಣವಾದದ್ದು ಈ ಘಟನೆಯೇ.  
ಸ್ವಾಮಿಜಿ ಗ್ರಾಮವನ್ನು ತೊರೆದ ಬೆನ್ನಲ್ಲೇ ಎಚ್ಚೆತ್ತ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಮದ್ಯ ನಿಷೇಧಕ್ಕೆ ಮುಂದಾದರು, ಇಷ್ಟೇ ಅಲ್ಲದೇ ದಲಿತರನ್ನು ಒಳಗೊಂಡಂತೆ ಎಲ್ಲಾ ಸಮುದಾಯಗಳ ನಾಯಕರು ಇರುವ 5 ಸದಸ್ಯರ ಸಮಿತಿಯೊಂದನ್ನು ರಚಿಸಿ ಮದ್ಯ ನಿಷೇಧ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುವಂತೆ ಮಾಡಿದರು. ಮದ್ಯ ಮುಕ್ತ ಗ್ರಾಮವಾದ ನಂತರ ನಿಂಬಾಳ ಗ್ರಾಮಸ್ಥರು ಸ್ವಾಮೀಜಿಯವರನ್ನು ಮತ್ತೆ ಗ್ರಾಮಕ್ಕೆ ಬರುವಂತೆ ಮನವಿ ಮಾಡಿದರು. ಇಷ್ಟೆಲ್ಲಾ ಆಗಿದ್ದು ಕೇವಲ ಎರಡೇ ವರ್ಷಗಳಲ್ಲಿ ಎಂಬುದು ಮತ್ತೊಂದು ಅಚ್ಚರಿ. ಮೌನವಾಗಿದ್ದುಕೊಂಡೇ ನಿಂಬಾಳ ಗ್ರಾಮವನ್ನು ಮದ್ಯಮುಕ್ತವನ್ನಾಗಿಸಲು  ಶ್ರಮಿಸಿದ ಶಾಂತಲಿಂಗೇಶ್ವರ ಸ್ವಾಮಿಜಿ ಈಗ ನಿಂಬಾಳ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಪಣತೊಟ್ಟಿಡ್ದಾರೆ. ಪರಿಣಾಮ ಈಗಾಗಲೇ ಗ್ರಾಮದ ಶೇ.75 ಮನೆಗಳು  ಶೌಚಾಲಯ ಹೊಂದಿದ್ದು ಶೇ.100 ಬಯಲು ಶೌಚ ಮುಕ್ತ ಗ್ರಾಮವಾಗುವತ್ತ ಸಾಗಿದೆ. ಸ್ವಾಮಿಜಿಯ ಮಾರ್ಗದರ್ಶನದಲ್ಲಿ ಇನ್ನೂ ಹತ್ತು ಹಲವು ಯೋಜನೆಗಳು ಪ್ರಗತಿಯಲ್ಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com