ಕೇರಳದ 105 ದೇವಾಲಯಗಳಿಗೆ ವಿಮೆಯೇ ಇಲ್ಲ!

ಕೇರಳದ ಕೊಲ್ಲಂ ದೇವಾಲಯದ ಪಟಾಕಿ ಸ್ಪರ್ಧೆ ವೇಳೆ ನಡೆದ ಘೋರ ಅಗ್ನಿ ದುರಂತ ಇನ್ನೂ ಮಾಸಿಲ್ಲ. ಈ ನಡುವೆ ಕೇರಳ 105 ಪ್ರಮುಖ ಮತ್ತು ಸಣ್ಣ ದೇವಾಲಯಗಳು ತಮ್ಮ ವಿವಿಧ ಆಚರಣೆಗಳಿಗೆ ವಿಮೆಯೇ ಮಾಡಿಸಿಲ್ಲ ಎಂಬ ವಿಚಾರ ತಿಳಿದುಬಂದಿದೆ...
ಪಟಾಕಿ ಅಗ್ನಿ ದುರಂತದಿಂದಾಗಿ ಹಾನಿಗೊಳಗಾದ ಮನೆ (ಚಿತ್ರಕೃಪೆ: ಪಿಟಿಐ)
ಪಟಾಕಿ ಅಗ್ನಿ ದುರಂತದಿಂದಾಗಿ ಹಾನಿಗೊಳಗಾದ ಮನೆ (ಚಿತ್ರಕೃಪೆ: ಪಿಟಿಐ)
Updated on

ತಿರುವನಂತಪುರ: ಕೇರಳದ ಕೊಲ್ಲಂ ದೇವಾಲಯದ ಪಟಾಕಿ ಸ್ಪರ್ಧೆ ವೇಳೆ ನಡೆದ ಘೋರ ಅಗ್ನಿ ದುರಂತ ಇನ್ನೂ ಮಾಸಿಲ್ಲ. ಈ ನಡುವೆ ಕೇರಳ 105 ಪ್ರಮುಖ ಮತ್ತು ಸಣ್ಣ ದೇವಾಲಯಗಳು  ತಮ್ಮ ವಿವಿಧ ಆಚರಣೆಗಳಿಗೆ ವಿಮೆಯೇ ಮಾಡಿಸಿಲ್ಲ ಎಂಬ ವಿಚಾರ ತಿಳಿದುಬಂದಿದೆ.

"ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್" ಪತ್ರಿಕೆ ವರದಿ ಮಾಡಿರುವಂತೆ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಸುಮಾರು 105 ಪ್ರಮುಖ ಮತ್ತು ಸಣ್ಣ ದೇವಾಲಯಗಳಿದ್ದು,  ತಿರುವನಂತಪುರದಲ್ಲಿ 27 ಮತ್ತು ಅಲಪ್ಪುಝಾ ಜಿಲ್ಲೆಯಲ್ಲಿ 15 ಪ್ರಮುಖ ದೇಗುಲಗಳಿವೆ. ಹಬ್ಬದ ಸಂದರ್ಭಗಳಲ್ಲಿ ಈ ದೇವಾಲಯಗಳಲ್ಲಿ ವಿವಿಧ ರೀತಿಯ ಪಟಾಕಿ ಪ್ರದರ್ಶನ ಮಾಡಲಾಗುತ್ತದೆ.  ಆದರೆ ಈ ಪಟಾಕಿ ಪ್ರದರ್ಶನಗಳಿಗೆ ದೇವಾಲಯದ ಆಡಳಿತ ಮಂಡಳಿಗಳು ಸುರಕ್ಷತೆಯ ವಿಮೆಯನ್ನೇ ಮಾಡಿಸಿಲ್ಲ ಎಂದು ತಿಳಿದುಬಂದಿದೆ.

ಪ್ರಸ್ತುತ ಕೇರಳದಲ್ಲಿ ಹಬ್ಬದ ಸೀಸನ್ ನಡೆಯುತ್ತಿದ್ದು, ಬಹುತೇಕ ಎಲ್ಲ ದೇವಾಲಯಗಳು ವಿವಿಧ ಆಚರಣೆಗಳಲ್ಲಿ ಪಟಾಕಿ ಪ್ರದರ್ಶನವನ್ನು ಏರ್ಪಡಿಸುತ್ತವೆ. ಆದರೆ ಕೊಲ್ಲಂ ಅಗ್ನಿ ದುರಂತ ಇದೀಗ  ಉಳಿದ ದೇಗುಲಗಳ ಆಚರಣೆ ಮೇಲೆ ಕರಿ ನೆರಳು ಬೀರಿದ್ದು, ವಿಮೆ ಮತ್ತು ಭದ್ರತಾ ದೃಷ್ಟಿಯಿಂದ ಪಟಾಕಿ ಪ್ರದರ್ಶನ ಮತ್ತು ಆಚರಣೆಗಳು ನಡೆಯುವುದೇ ಅನುಮಾನ ಎಂಬಂತಾಗಿದೆ. ಇನ್ನು  ವಿಮಾ ತಜ್ಞ ಮತ್ತು ಏಮ್ಸ್ ವಿಮಾ ಸಂಸ್ಥೆಯ ನಿರ್ದೇಶಕ ವಿಶ್ವನಾಥನ್ ಒದತ್ ಅವರು ಹೇಳಿವಂತೆ ಹಬ್ಬದ ಸೀಸನ್ ಆದ್ದರಿಂದ ಇಷ್ಟು ಹೊತ್ತಿಗಾಗಲೇ ಎಲ್ಲ ದೇವಾಲಯಗಳು ವಿಮೆ  ಮಾಡಿಸಿರುತ್ತಿದ್ದವು. ಆದರೆ ಈ ವರ್ಷ ಯಾವುದೇ ದೇವಾಲಯಗಳು ವಿಮೆಗೆ ಆಸಕ್ತಿ ತೋರಿಸಿಲ್ಲ ಎಂದು ಹೇಳಿದ್ದಾರೆ.

ಕೊಲ್ಲಂ ದೇಗುಲದ ವಿಮೆ ತೀರಾ ಸಣ್ಣ ಪ್ರಮಾಣದ್ದು..!
ಇನ್ನು ವಿಮೆ ಮಾಡಿಸಿದ್ದರೂ ಪಟಾಕಿ ಪ್ರದರ್ಶನ ಮತ್ತು ಆಚರಣೆ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಗಿ ಮತ್ತು ಅನುಮತಿ ಪಡೆಯದಿದ್ದರೆ ವಿಮಾ ಹಣ ಬಿಡುಗಡೆಯಾಗುವುದಿಲ್ಲ  ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಕೊಲ್ಲಂ ಅಗ್ನಿ ದುರಂತದ ಕುರಿತು ಮಾಡಿದ ಅವರು, ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮತ್ತು ಹಾನಿಯಾದ ಆಸ್ತಿಗೆ ಹೋಲಿಕೆ ಮಾಡಿದರೆ  ದೇವಾಲಯದ ಆಡಳಿಂತ ಸಿಬ್ಬಂದಿ ಮಾಡಿಸಿದ್ದ 1 ಕೋಟಿ ವಿಮೆ ತೀರಾ ಕಡಿಮೆಯಾಯಿತು ಎಂದು ನ್ಯೂ ಇಂಡಿಯಾ ಆಶ್ಯೂರೆನ್ಸ್ ಸಂಸ್ಥೆಯ ಆಡಳಿತಾಧಿಕಾರಿಯಾದ ರಾಮಚಂದ್ರನ್ ನಾಯರ್   ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಈ ಹಣಕ್ಕೂ ಕೂಡ ಕೊಕ್ಕೆ ಬೀಳುವ ಸಾಧ್ಯತೆ ಇದ್ದು, ದೇವಾಲಯದ ಆಡಳಿತ ಮಂಡಳಿಯವರು ಅನುಮತಿ ಇಲ್ಲದೇ ಪಟಾಕಿ ಸ್ಪರ್ಧೆ ಆಯೋಜನೆ ಮತ್ತು ಪಟಾಕಿ ಶೇಖರಣೆ  ಮಾಡಿರುವುದು ದುರಂತಕ್ಕೆ ಕಾರಣವಾದ್ದರಿಂದ ಪರಿಹಾರ ಹಣ ಬಿಡುಗಡೆ ಅನುಮಾನವಾಗಿದೆ. ಒಂದು ವೇಳೆ ವಿಮಾ ಸಂಸ್ಥೆ ಒಪ್ಪಿದರೆ ಮಾತ್ರ ಹಣ ಬಿಡುಗಡೆ ಮಾಡಬಹುದು ಎಂಜು  ರಾಮಚಂದ್ರನ್ ನಾಯರ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com