ನವದೆಹಲಿ: ಬರಪೀಡಿತ ಲಾತೂರ್ ಗೆ ನೀರು ಪೂರೈಕೆಗೆ ಸಹಾಯ ಮಾಡುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ರದ ಬಗ್ಗೆ ಕಿಡಿ ಕಾರಿರುವ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮೊದಲು ದೆಹಲಿ ಜನತೆಯ ನೀರಿನ ದಾಹ ನೀಗಿಸಿ ಎಂದಿದ್ದಾರೆ.
ದೆಹಲಿ ಜನತೆ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಮೊದಲು ನೀರು ಪೂರೈಕೆ ಮಾಡಿ ನಂತರ ಲಾತೂರ್ ಬಗ್ಗೆ ಮಾತನಾಡಿ ಎಂದು ಅವರು ಕೇಜ್ರಿವಾಲ್ ಗೆ ವಿರುದ್ಧ ಕಿಡಿ ಕಾರಿದ್ದಾರೆ.
ದೆಹಲಿಯಲ್ಲಿರುವ ಅನೇಕ ಪ್ರದೇಶದ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ ಎಂದ ಅವರು, ಪ್ರತಿಯೊಂದು ವಿಷಯದಲ್ಲೂ ಹೇಳಿಕೆ ನೀಡಬೇಕು ಎಂದು ಕೇಜ್ರಿವಾಲ್ ಬಯಸುತ್ತಾರೆ, ಅದೇ ರೀತಿ ಲಾತೂರ್ ವಿಷಯದಲ್ಲೂ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕೇಜ್ರಿವಾಲ್, ಲಾತೂರ್ ನೀರು ಪೂರೈಕೆಗೆ ನಾವು ಪ್ರತಿ ದಿನ 10 ಲಕ್ಷ ಲೀಟರ್ ನೀರು ಪೂರೈಕೆ ಮಾಡಲು ಸಿದ್ಧವಿದ್ದೇವೆ ಎಂದು ತಿಳಿಸಿದ್ದರು.