ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2019 ರಲ್ಲಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಗಟ್ಟಲು ರಾಷ್ಟ್ರೀಯ ಮಟ್ಟದಲ್ಲಿ ಮೋದಿ ವಿರೋಧಿ ಮೈತ್ರಿಕೂಟ ರಚನೆ ಮಾಡಲು ಬಿಹಾರ ಸಿಎಂ ನಿತೀಶ್ ಕುಮಾರ್ ಉತ್ಸುಕರಾಗಿದ್ದಾರೆ. ಆದರೆ ಮೈತ್ರಿಕೂಟ ರಚನೆ ವಿಷಯದಲ್ಲಿ ಸಾಕಷ್ಟು ಅಡ್ಡಿಗಳಿವೆ.
ನಿತೀಶ್ ಕುಮಾರ್ ಬಿಹಾರದಲ್ಲಿ ಆರ್ ಜೆಡಿ, ಕಾಂಗ್ರೆಸ್ ನೊಂದಿಗೆ ಮೈತ್ರಿಕೂಟದ ಸರ್ಕಾರ ನಡೆಸುತ್ತಿದ್ದಾರಾದರೂ ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ರಚನೆಗೆ ಲಾಲೂ ಪ್ರಸಾದ್ ಹಾಗೂ ಕಾಂಗ್ರೆಸ್ ಒಪ್ಪಿಗೆ ಸೂಚಿಸುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ನಿತೀಶ್ ಕುಮಾರ್ ಮೋದಿ ವಿರೋಧಿ ಮೈತ್ರಿಕೂಟದಲ್ಲಿ ಉತ್ತರ ಪ್ರದೇಶದ ಆರ್ ಎಲ್ ಡಿ ಮುಖಂಡ ಅಜಿತ್ ಸಿಂಗ್ ಹಾಗೂ ಬಾಬು ಲಾಲ್ ಮರಾಂಡಿ ಅವರ ಜಾರ್ಖಂಡ್ ವಿಕಾಸ್ ಮೋರ್ಚಾ ಪಕ್ಷದೊಂದಿಗೂ ಮೈತ್ರಿ ಆಯ್ಕೆಯನ್ನು ಮುಕ್ತವಾಗಿರಿಸಿದ್ದಾರೆ. ಆದರೆ ಇದಕ್ಕೆ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ನಿತೀಶ್ ಅವರನ್ನು ಜೆಡಿಯು ರಾಷ್ಟ್ರಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್, ಶರದ್ ಯಾದವ್ ಅವರು ಜೆಡಿಯು ರಾಷ್ಟ್ರಾಧ್ಯಕ್ಷರಾಗಿ ಮುಂದುವರೆಯುವುದನ್ನು ಬೆಂಬಲಿಸಲು ಆರ್ ಜೆಡಿ ಕೆಲವು ನಿಯಮಗಳನ್ನು ಸಡಿಲಿಸಿತ್ತು. ಆದರೆ ಜೆಡಿಯು ಮಾತ್ರ ಶರದ್ ಯಾದವ್ ಅವರು ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಬಾರದೆಂಬ ಕಾರಣಕ್ಕೆ ಎಲ್ಲಾ ನಿಯಮಗಳನ್ನು ಬದಲಾಯಿಸಿದೆ ಎಂದು ಟೀಕಿಸಿದ್ದರು.
ಇನ್ನು ಕಾಂಗ್ರೆಸ್ ರಾಜ್ಯ ಮಟ್ಟದಲ್ಲಿ ಜೆಡಿಯು ಪಕ್ಷದೊಂದಿಗೆ ಮೈತ್ರಿಗೆ ಮುಂದಾಗಿದೆ. ಆದರೆ ರಾಷ್ಟ್ರ ಮಟ್ಟದಲ್ಲಿ ಮೋದಿ ವಿರೋಧಿ ಮೈತ್ರಿಕೂಟ ರಚನೆಯಾಗುವ ಪ್ರಸ್ತಾಪವಾದರೆ ಕಾಂಗ್ರೆಸ್ ಪಕ್ಷ ಮೈತ್ರಿಕೂಟದ ನೇತೃತ್ವಕ್ಕಾಗಿ ಬೇಡಿಕೆ ಇಡಲಿದ್ದು, ನಿರಾಕರಿಸಿದರೆ ಮೈತ್ರಿಕೂಟವನ್ನು ಬೆಂಬಲಿಸದೇ ಇರುವ ಸಾಧ್ಯತೆ ಇದೆ.
ಈ ಹಿಂದೆ ಹಳೆ ಜನತಾ ಪರಿವಾರವನ್ನು ಒಗ್ಗೂಡಿಸುವ ಪ್ರಸ್ತಾವನೆ ಎದುರಾದಾಗ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಉತ್ಸಾಹ ತೋರಿರಲಿಲ್ಲ. ಪರಿಣಾಮವಾಗಿ ಹಳೆ ಜನತಾ ಪರಿವಾರ ವಿಲೀನಗೊಳ್ಳುವುದಕ್ಕೆ ಅಡ್ಡಿ ಉಂಟಾಗಿತ್ತು.
Advertisement