ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು
ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು

ಅಗ್ನಿ ಆಕಸ್ಮಿಕದಲ್ಲಿ ದೆಹಲಿ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಬಹುತೇಕ ನಾಶ

ದೆಹಲಿಯ ಎಫ್ ಐಸಿಸಿಐ ಕಟ್ಟಡದಲ್ಲಿನ ರಾಷ್ಟ್ರೀಯ ಪ್ರಾಕೃತಿಕ ಇತಿಹಾಸ ವಸ್ತು ಸಂಗ್ರಹಾಲಯದಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡ ಇಡೀ ವಸ್ತು ಸಂಗ್ರಹಾಲಯವನ್ನು ಸಂಪೂರ್ಣವಾಗಿ ಅಗ್ನಿಗಾಹುತಿಯಾಗುವಂತೆ...

ನವದೆಹಲಿ: ದೆಹಲಿಯ ಎಫ್ ಐಸಿಸಿಐ ಕಟ್ಟಡದಲ್ಲಿನ ರಾಷ್ಟ್ರೀಯ ಪ್ರಾಕೃತಿಕ ಇತಿಹಾಸ ವಸ್ತು ಸಂಗ್ರಹಾಲಯದಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡ ಇಡೀ ವಸ್ತು ಸಂಗ್ರಹಾಲಯವನ್ನು ಸಂಪೂರ್ಣವಾಗಿ ಅಗ್ನಿಗಾಹುತಿಯಾಗುವಂತೆ ಮಾಡಿದೆ.

ಕಳೆದ ರಾತ್ರಿ. 1.45ರ ಸುಮಾರಿಗೆ ಕಾಣಿಸಿಕೊಂಡಿದ್ದ ಬೆಂಕಿ ನಂತರ ಇಡೀ ಕಟ್ಟಡವನ್ನು ಆವರಿಸಿಕೊಂಡಿತ್ತು. ಬೆಂಕಿಯ ಉಗ್ರ ನರ್ತನದಿಂದ ವಿಷಕಾರಿ ಹೊಗೆ ಎಲ್ಲೆಡೆ ಪಸರಿಸಲು ಆರಂಭವಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಆರು ಅತಂಸ್ತಿನಲ್ಲೂ ಬೆಂಕಿ ಆವರಿಸಿದ್ದರಿಂದ ಬೆಂಕಿ ನಂದಿಸಲು ಭಾರೀ ಕಷ್ಟವಾಗಿತ್ತು. ಇದರಂತೆ 35 ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಸ್ಥಳದಲ್ಲಿ ಬೀಡು ಬಿಟ್ಟು ಕಾರ್ಯಾಚರಣೆ ನಡೆಸಿತ್ತು. ಇದೀಗ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ವಸ್ತು ಸಂಗ್ರಹಾಲಯ ಸಂಪೂರ್ಣವಾಗಿ ನಾಶಗೊಂಡಿದೆ ಎಂದು ತಿಳಿದುಬಂದಿದೆ.

ಅಧಿಕಾರಿಗಳು ಹೇಳಿರುವಂತೆ, ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದ್ದ ವಸ್ತುಗಳು, ದಾಖಲೆಗಳು ಬೆಂಕಿಗಾಹುತಿಯಾಗಿವೆ. ಹಾನಿ ಕುರಿತಂತೆ ಪರಿಶೋಧನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಬೆಂಕಿ ನಂದಿಸುವಾಗ 5 ಅಗ್ನಿಶಾಮಕ ದಳ ಅಧಿಕಾರಿಗಳೂ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿ ಅವಘಡಕ್ಕೆ ಈ ವರೆಗೂ ಯಾವುದೇ ಕಾರಣಗಳೂ ತಿಳಿದುಬಂದಿಲ್ಲ.

ಪರಿಸರ ಮತ್ತು ಅರಣ್ಯ ಸಚಿವಾಲಯದ ಅಡಿಯಲ್ಲಿ ಮ್ಯೂಸಿಯಂ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಘಟನಾ ಸ್ಥಳಕ್ಕೆ ಪರಿಸರ ಸಚಿವ ಪ್ರಕಾಶ್ ಜವಡೇಕರ್ ಅವರು ಭೇಟಿ ನೀಡಿದ್ದು, ಬೆಂಕಿ ಅವಘಡ ನಿಜಕ್ಕೂ ದುರಂತ. ಮ್ಯೂಸಿಯಂ ರಾಷ್ಟ್ರೀಯ ನಿಧಿಯಾಗಿತ್ತು. ನಷ್ಟವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ರಾಷ್ಟ್ರದಲ್ಲಿರುವ ಎಲ್ಲಾ 34 ಮ್ಯೂಸಿಯಂಗಳ ಅಗ್ನಿ ಅವಘಡಗಳ ಲೆಕ್ಕ ಪರಿಶೋಧನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಗ್ನಿ ಅವಘಡದಿಂದ ಸಾಕಷ್ಟು ಆಸ್ತಿ ನಾಶವಾಗಿದೆ. ಪುನರ್ ನಿರ್ಮಾಣಕ್ಕೆ ಸಮಯ ತೆಗೆದುಕೊಳ್ಳಲಿದೆ. ಇನ್ನು ವಸ್ತು ಸಂಗ್ರಹಾಲಯ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಎಫ್‌ಐಸಿಸಿಐ)ಕ್ಕೆ ಸೇರಿದ್ದಾಗಿದ್ದು, ಅವರೇ ಅಗ್ನಿ ಅವಘಡದ ಲೆಕ್ಕ ಪರಿಶೋಧನೆ ನಡೆಸಿ ಹಾನಿಗೊಳಗಾಗಿರುವ ಆಸ್ತಿಯನ್ನು ಮರುನಿರ್ಮಾಣ ಮಾಡಬೇಕಿದೆ ಎಂದು ಜವಡೇಕರ್ ಹೇಳಿದ್ದಾರೆ.

ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಅಗ್ನಿ ಸುರಕ್ಷತಾ ಉಪಕರಣಗಳು
ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಉಪಕರಣಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲಿಲ್ಲ ಎಂಬ ಸುದ್ದಿ ಇದೀಗ ಬೆಳಕಿಗೆ ಬಂದಿದ್ದು,  ಅಗ್ನಿ ಕೆನ್ನಾಲಿಗೆ ಹೆಚ್ಚಾಗಲು ಇದು ಕಾರಣವಾಗಿತ್ತು ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಮಾತನಾಡಿರುವ ಅಗ್ನಿಶಾಮಕ ದಳದ ಅಧಿಕಾರಿ ರಾಜೇಶ್ ಪನ್ವಾರ್ ಅವರು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿ ಸುರಕ್ಷತಾ ಉಪಕರಣಗಳನ್ನು ಆನ್ ಮಾಡಿದ್ದೆವು. ಆದರೆ, ಉಪಕರಣಗಳು ಈ ವೇಳೆ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಬೆಂಕಿ ಎಲ್ಲೆಡೆ ಆವರಿಸಲು ಆರಂಭಿಸಿತ್ತು. ಒಂದು ವೇಳೆ ಅಗ್ನಿ ಸುರಕ್ಷತಾ ಉಪಕರಣಗಳು ಕಾರ್ಯನಿರ್ವಸಿದ್ದರೆ, ಇಷ್ಟೊಂದು ಹಾನಿಯಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಬೆಂಕಿಯ ಹೊಗೆ ಕಟ್ಟಡದ ಸುತ್ತಲೂ ಆವರಿಸಿದೆ. ಎಫ್ಐಸಿಸಿಐ ಆಡಿಟೋರಿಯಂ ಸುರಕ್ಷಿತವಾಗಿದೆ. ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ' ಮಾತ್ರ ಸಂಪೂರ್ಣವಾಗಿ ನಾಶಗೊಂಡಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಘಟನೆ ಕುರಿತಂತೆ ಮಾತನಾಡಿರುವ ಎಫ್ಐಸಿಸಿಐ ಅಧಿಕಾರಿಯೊಬ್ಬರು, ದೆಹಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಿಮಿಸಿದ್ದರು. ಶೀಘ್ರಗತಿಯ ಪ್ರತಿಕ್ರಿಯೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಕ್ಕೆ ಅವರಿಗೆ ಧನ್ಯವಾದ ಹೇಳಲೇಬೇಕು. ಅದೃಷ್ಟವಶಾತ್ ಘಟನೆ ನಡೆದ ವೇಳೆ ಕಟ್ಟಡದಲ್ಲಿ ಯಾರೂ ಇರಲಿಲ್ಲ. ಇನ್ನು ಎಫ್ಐಸಿಸಿಐ ಕಚೇರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದ್ದಾರೆ.

ಮ್ಯೂಸಿಯಂನಲ್ಲಿ ಅಮೂಲ್ಯ ಡೈನೋಸರ್‌ ಪಳೆಯುಳಿಕೆ ಸೇರಿದಂತೆ ಇತಿಹಾಸಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ಮತ್ತು ಪ್ರಾತ್ಯಕ್ಷಿಕೆಗಳು ಇದ್ದವು ಎನ್ನಲಾಗಿದೆ. ಭಾರತದ ಪ್ರಾಕೃತಿಕ ಸಂಪತ್ತಿನ ಬಗ್ಗೆ ಮಾಹಿತಿ ಒದಗಿಸುತ್ತಿದ್ದ ಈ ಮ್ಯೂಸಿಯಂನ್ನು 1978ರಲ್ಲಿ ಪ್ರಾರಂಭಿಸಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com