ನವದೆಹಲಿ: ಜ.2 ರ ಉಗ್ರರ ದಾಳಿ ನಂತರ ಇದೇ ಮೊದಲ ಬಾರಿಗೆ ಭಾರತ- ಪಾಕ್ ದ್ವಿಪಕ್ಷೀಯ ಮಾತುಕತೆ ನಡೆದಿದ್ದು ಭಾರತ ಪಾಕಿಸ್ತಾನದ ಬಳಿ ಗಡಿ ಪ್ರದೇಶದ ಭಯೋತ್ಪಾದನೆ ವಿಷಯವನ್ನು ಪ್ರಸ್ತಾಪಿಸಿದೆ. ಪದೇಪದೆ ಕಾಶ್ಮೀರ ವಿಚಾರ ಪ್ರಸ್ತಾಪಿಸಿ ಮಾತುಕತೆಯ ಹಾದಿ ತಪ್ಪಿಸುವ ಪಾಕಿಸ್ತಾನ ಈ ಬಾರಿಯೂ ಅದೇ ಚಾಳಿ ಮುಂದುವರಿಸಿದೆ.
ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ಆಗಮಿಸಿರುವ ಪಾಕ್ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಅಹ್ಮದ್ ಚೌಧರಿ, ಭಾರತ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರೊಂದಿಗಿನ ಮಾತುಕತೆ ವೇಳೆ ಬಲೂಚಿಸ್ತಾನ ಪ್ರತ್ಯೇಕತಾವಾದದ ವಿಷಯದಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದರು.
ಮುಂಬೈ ದಾಳಿ ಉಗ್ರರ ಬಗ್ಗೆಯೂ ಪ್ರಸ್ತಾಪ ಮಾಡಿರುವ ಭಾರತ, 26/11ರ ಮುಂಬೈ ದಾಳಿ ಮತ್ತು ಪಠಾಣ್ಕೋಟ್ ದಾಳಿ ಕುರಿತು ತನಿಖೆ ಚುರುಕುಗೊಳಿಸಬೇಕಿದೆ. ದಾಳಿಯ ಪ್ರಮುಖ ಸಂಚುಕೋರ, ಉಗ್ರ ಮಸೂದ್ ಅಜರ್ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಲ್ಲಿ ಸೇರಿಸಲು ಸಹಮತ ವ್ಯಕ್ತಪಡಿಸಬೇಕು’ ಎಂದು ಆಗ್ರಹಿಸಿದೆ.
ನೌಕಾ ದಳದ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ರನ್ನು ರಾ ಏಜೆಂಟ್ ಎಂದು ಆರೋಪಿಸಿ ಬಂಧಿಸಿರುವ ಪಾಕ್ ಕ್ರಮವನ್ನು ‘ಅಪಹರಣ’ ಎಂದಿರುವ ಭಾರತ, ಅವರ ಬಿಡುಗಡೆ ವಿಷಯದಲ್ಲಿ ದೂತಾವಾಸದ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜೈಶಂಕರ್, ಯಾವುದಾದರು ಬೇಹುಗಾರಿಕಾ ಏಜೆನ್ಸಿ ತನ್ನ ಗೂಢಚಾರನನ್ನು ಆತನದೇ ಪಾಸ್ಪೋರ್ಟ್ನೊಂದಿಗೆ ವೀಸಾ ಇಲ್ಲದೆ ಬೇಹುಗಾರಿಕೆಗೆ ಕಳುಹಿಸುತ್ತದೆಯೇ ಎಂದು ಚೌಧರಿಯನ್ನು ಪ್ರಶ್ನಿಸಿದ್ದಾರೆ.
ಮಾತುಕತೆ ನಡೆಯುತ್ತಿದ್ದಾಗಲೇ ಪಾಕಿಸ್ತಾನ ಫೋಟೊ ಹಾಗೂ ಪಾಕ್ ಎತ್ತಿರುವ ಪ್ರಶ್ನೆಗಳನ್ನು ಬಿಡುಗಡೆ ಮಾಡಿತ್ತು. ಇದಾದ 2 ಗಂಟೆಗಳ ಬಳಿಕ ಭಾರತ ಸರ್ಕಾರ ದ್ವಿಪಕ್ಷೀಯ ಮಾತುಕತೆಯ ಫೋಟೊ ಹಾಗೂ ಪತ್ರಿಕಾ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿತು. ಪಾಕಿಸ್ತಾನ ಮಾಧ್ಯಮಗಳು ದ್ವಿಪಕ್ಷೀಯ ಮಾತುಕತೆ ಮುಕ್ತಾಯಗೊಳ್ಳುವುದರೊಳಗೇ ಫೋಟೊ ಹಾಗೂ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು ಶಿಷ್ಠಾಚಾರದ ಉಲ್ಲಂಘನೆಯಾಗಿರುವುದರಿಂದ ಮಾತುಕತೆ ಬಗ್ಗೆ ಜಂಟಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿಲ್ಲ ಎಂದು ವಿಶ್ಲೇಷಿಸಲಾಗಿದೆ.
Advertisement