ತಿರುವನಂತಪುರ:ಹೈಟೆಕ್ ತಂತ್ರಜ್ಞಾನ ಬಳಸಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿರುವ ಕೃತ್ಯದಲ್ಲಿ ಮೂವರು ರೊಮಾನಿಯಾ ರಾಷ್ಟ್ರದ ಪ್ರಜೆಗಳ ಕೈವಾಡವಿರುವುದಾಗಿ ಶಂಕಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಮುಂಬೈಯಲ್ಲಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಗಾರ್ಬೆಯಲ್ ಮಾರಿಯನ್ ಬಂಧಿತ ಆರೋಪಿಯಾಗಿದ್ದು,ವಿಚಾರಣೆಗೊಳಪಡಿಸಿರುವ ಮುಂಬಯಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿ ಪ್ರಕಾರ ಎಟಿಎಮ್ ಯಂತ್ರಗಳಿಗೆ ಅತ್ಯಾಧುನಿಕ ಇಲೆಕ್ಟ್ರಾನಿಕ್ ಉಪಕರಣ ಅಳವಡಿಸಿ ಎಟಿಎಮ್ ಗೆ ಬರುವ ಗ್ರಾಹಕರ ಅಕೌಂಟ್ ನಂಬರ್ ಹಾಗೂ ಸೀಕ್ರೆಟ್ ಪಿನ್ ನಂಬರ್ ಕದ್ದು ನಕಲಿ ಕಾರ್ಡ್ ಸೃಷ್ಟಿಸಿ ಹಣ ದೋಚುವ ವ್ಯವಸ್ಥಿತ ಜಾಲ ರೂಪಿಸಿದ್ದರು ಎಂದು ಹೇಳಲಾಗಿದೆ. ಮೂವರು ರೋಮಾನಿಯಾ ಪ್ರಜೆಗಳಲ್ಲಿ ಇಬ್ಬರು ಭಾರತದಿಂದಲೇ ಪರಾರಿಯಾಗಿದ್ದಾರೆ. ಒಬ್ಬ ಆರೋಪಿಯನ್ನು ಮುಂಬಯಿನ ವರ್ಲಿ ಹೋಟೆಲ್ ನಲ್ಲಿ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಹಣ ಕಳೆದುಕೊಂಡ ಗ್ರಾಹಕರಿಂದ 45 ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು, ಕಾರ್ಯ ಪ್ರವೃತ್ತರಾದ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ವಿದೇಶಿ ಪ್ರಜೆಗಳ ಕೃತ್ಯ ಬಯಲಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯ ಸದಸ್ಯರು ಈ ತಂಡದಲ್ಲಿರಬಹುದು ಎಂಬ ಶಂಕೆ ಮೇಲೆ ಪೊಲೀಸರು ಬಂಧಿತನ ವಿಚಾರಣೆ ಮುಂದುವರೆಸಿದ್ದಾರೆ.
Advertisement