ರಾಯ್ ಪುರ: ನಕ್ಸಲ್ ಪೀಡಿತ ಛತ್ತೀಸ್ ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ ನಡೆದ ಎನ್ ಕೌಂಟರ್ ನಲ್ಲಿ ನಾಲ್ಕು ಮಂದಿ ನಕ್ಸಲರನ್ನು ಹತ್ಯೆಗೈಯುವಲ್ಲಿ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಛತ್ತೀಸ್ ಗಢದ ದಾಂತೆವಾಡದ ದಬ್ಬ-ಕುನ್ನಾ ಗುಡ್ಡಗಾಡು ಪ್ರದೇಶದಲ್ಲಿ ನಕ್ಸಲರು ಅವಿತಿರುವ ಕುರಿತ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಗಳು ಇಂದು ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದ್ದರು. ಭದ್ರತಾ ಸಿಬ್ಬಂದಿಗಳ ಆಗಮಿಸುತ್ತಿದ್ದಂತೆಯೇ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದಾರೆ. ಕೂಡಲೇ ಪ್ರತಿದಾಳಿ ಆರಂಭಿಸಿದ ಭದ್ರತಾಪಡೆಗಳು ನಾಲ್ಕು ಮಂದಿ ನಕ್ಸಲರನ್ನು ಹೊಡೆದುರುಳಿಸಿದೆ. ಈ ನಾಲ್ಕು ಮಂದಿಯ ಪೈಕಿ ಓರ್ವ ಮಹಿಳೆ ಕೂಡ ಸೇರಿದ್ದು, ಈಕೆ ಮಹಿಳಾ ಕೇಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ದಾಂತೆವಾಡ ಪೊಲೀಸ್ ವರಿಷ್ಠಾಧಿಕಾರಿ ಕಮ್ಲೋಚನ್ ಕಶ್ಯಪ್ ಅವರು, ಕಳೆದ ರಾತ್ರಿಯೇ ಕಾರ್ಯಾಚರಣೆ ಆರಂಭವಾಗಿದೆ. ದಬ್ಬ-ಕುನ್ನಾ ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ನಕ್ಸಲರು ಅವಿತಿದ್ದರು. ಈ ವೇಳೆ ನಡೆದ ಕಾರ್ಯಾಚರಣೆಯಲ್ಲಿ ನಾಲ್ಕು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ. ಅಲ್ಲದೆ ಓರ್ವ ನಕ್ಸಲ್ ವಿರೋಧಿ ಯೋಧನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಘಟನಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ವ್ಯಾಪಕ ಶೋಧ ನಡೆಸುತ್ತಿದ್ದು, ಮತ್ತಷ್ಟು ನಕ್ಸಲರು ಅವಿತಿರುವ ಶಂಕೆ ವ್ಯಕ್ತವಾಗಿದೆ.
Advertisement