ರಾಖಿ ಕಟ್ಟಿದ ಸಹೋದರಿಗೆ ಶೌಚಾಲಯ ಉಡುಗೊರೆ ನೀಡಿದ ಅಣ್ಣ!
ರಾಮಗಡ (ಜಾರ್ಖಂಡ್): ರಕ್ಷಾ ಬಂಧನ ದಿನ ಬರುತ್ತಿದ್ದಂತೆ ರಾಖಿ ಕಟ್ಟಿದಾಕ್ಷಣ ಸಹೋದರರು ತಮ್ಮ ಸಹೋದರಿಯರಿಗೆ ಹಣ ನೀಡುವುದು ಅಥವಾ ಅವರಿಗೆ ಇಷ್ಟವಾಗುವ ವಿಧ ವಿಧವಾದ ಉಡುಗೊರೆ ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಅಣ್ಣ ರಕ್ಷಾಬಂಧನ ದಿನದಂದು ತನ್ನ ತಂಗಿಗೆ ಶೌಚಾಲಯವೊಂದನ್ನು ಉಡುಗೊರೆಯಾಗಿ ನೀಡಿದ್ದಾನೆ.
ಮನೆಯ ಬಳಿ ಶೌಚಾಲಯ ನಿರ್ಮಾಣ ಮಾಡಿದರೆ ದರಿದ್ರ ಆವರಿಸುತ್ತದೆ ಎಂಬ ಮೂಢನಂಬಿಕೆ ಹಾಗೂ ಇನ್ನಿತರೆ ಸಂಪ್ರದಾಯಗಳು ರಾಮಗಡ ಹಾಗೂ ಜಾರ್ಖಾಂಡ್ ನಲ್ಲಿ ಈಗಾಲೂ ರೂಢಿಯಲ್ಲಿದೆ. ಇಲ್ಲಿರುವ ಸಾಕಷ್ಟು ಮಂದಿ ಈಗಾಲೂ ಶೌಚಾಲಯವನ್ನು ನಿರ್ಮಾಣ ಮಾಡದೆ, ಬಹಿರಂಗ ಪ್ರದೇಶದಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಭಾರತದಲ್ಲಿರುವ ಈ ಅನಿಷ್ಟ ಪದ್ಧತಿಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಅರಿವು ಮೂಡಿಸುವ ಸಲುವಾಗಿ ಸಾಕಷ್ಟು ಪ್ರಚಾರ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಕೈಗೊಂಡಿದೆ. ಇದರಂತೆ ಸರ್ಕಾರದ ಈ ಶ್ರಮ ದಿನಕಳೆದಂತೆ ಪ್ರತಿಫಲ ನೀಡುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡಿರುವ ರಾಮಗಡದ ನಿವಾಸಿ ಪಿಂಟು ಎಂಬಾತ ರು.30 ಸಾವಿರ ವೆಚ್ಚದಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಿ ರಕ್ಷಾ ಬಂಧನ ಹಿನ್ನೆಲೆಯಲ್ಲಿ ತನ್ನ ಸಹೋದರಿಗೆ ಉಡುಗೊರೆಯಾಗಿ ನೀಡಿ ಭಿನ್ನತೆಯನ್ನು ಸಾರಿದ್ದಾನೆ.
ಪ್ರಧಾನಮಂತಿಯವರ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಸುದ್ದಿಗಳನ್ನು ನೋಡಿದ್ದೆ. ಬಯಲು ಶೌಚದಿಂದ ನನ್ನ ಕುಟುಂಬಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಬಯಲು ಮುಕ್ತ ಶೌಚಗೊಳಿಸಲು ತೀರ್ಮಾನಿಸಿದೆ. ಇದರಂತೆ ಶೌಚಾಲಯ ನಿರ್ಮಾಣದ ಬಗ್ಗೆ ಆಲೋಚಿಸಿದೆ. ಶೌಚಾಲಯ ನಿರ್ಮಾಣ ಮಾಡಿ ನನ್ನ ಸಹೋದರಿಗೆ ಉಡುಗೊರೆಯಾಗಿ ನೀಡಿದೆ. ನನ್ನ ಈ ಕಾರ್ಯಕ್ಕೆ ಜವಾಹರ್ ನಗರ ಪಂಚಾಯತ್ ಕೂಡ ಪ್ರೋತ್ಸಾಹ ನೀಡಿತು ಎಂದು ಪಿಂಟು ಹೇಳಿಕೊಂಡಿದ್ದಾರೆ.
ನನ್ನ ಅಣ್ಣ ಈ ರೀತಿಯ ಉಡುಗೊರೆಯೊಂದನ್ನು ನೀಡುತ್ತಾನೆಂದು ಊಹಿಸಿಯೂ ಇರಲಿಲ್ಲ. ಅಣ್ಣನ ಈ ಉಡುಗೊರೆಗೆ ಬಹಳ ಸಂತೋಷವಾಗುತ್ತಿದೆ ಎಂದು ಸಹೋದರಿ ರೇಖಾದೇವಿ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ